ಕೆರೂರ: ಪಟ್ಟಣದ ಗ್ರಾಮ ದೇವತೆಯರಾದ ದ್ಯಾಮವ್ವ, ದುರ್ಗವ್ವರ ವಿಜೃಂಭಣೆಯ ಜಾತ್ರಾ ಉತ್ಸವದ ನಿಮಿತ್ತ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನವರೆಗೆ ಪಟ್ಟಣದ ಬಡಿಗೇರ ಓಣಿಯ ದೇವಿಯರ ದೇವಸ್ಥಾನದ ಆವರಣದಲ್ಲಿ ನಾಡಿನ ಸುಭಿಕ್ಷೆ, ಸಮೃದ್ಧಿ, ಸಹಬಾಳ್ವೆಗೆ ಪ್ರಾರ್ಥಿಸಿ ನವಚಂಡಿ, ಪರ್ಜನ್ಯ, ನವಗ್ರಹ ಸೇರಿದಂತೆ ಒಟ್ಟು ನವ (9) ಹೋಮಗಳ ಆಚರಣೆ ನೂರಾರು ಸದ್ಭಕ್ತರು, ಸುಮಂಗಲೆಯರ ಶ್ರದ್ಧೆ, ಭಕ್ತಿಯೊಂದಿಗೆ ನೆರವೇರಿತು.
ನಾಡಿನ ಹೆಸರಾಂತ ಆಚಾರ್ಯ ಸೂಡಿಯ ಗಣಪತಿಭಟ್ ರಾಮಭಟ್ ಜೋಶಿ ಅವರ ನೇತೃತ್ವದಲ್ಲಿ ಸುಮಾರು 15 ಅರ್ಚಕ ಪಡೆಯು ಈ ಧಾರ್ಮಿಕ ಅತ್ಯಂತ ಶ್ರದ್ಧೆಯ ಆಚರಣೆಯಲ್ಲಿ ನವ ಚಂಡಿ ಹೋಮ, ಸುದರ್ಶನ ಹೋಮ, ಪರ್ಜನ್ಯ ಹೋಮ, ಗಣಹೋಮ, ಗಣಪತಿ ಹೋಮ, ನವಗ್ರಹ ಹೋಮ, ಕಳಶ ಶುದ್ಧಿ, ಪೂರ್ಣ ಹೋಮ ಧಾರ್ಮಿಕ ಆಚರಣೆಗಳು ಬೆಳಗಿನಿಂದ ಮಧ್ಯಾಹ್ನ 2 ಗಂಟೆಯ ದೀರ್ಘ ಕಾಲ ನೆರವೇರಿದವು.
ಅಕ್ಕಿ ಪೂಜೆ: ಅದ್ಧೂರಿ ಜಾತ್ರಾ ಉತ್ಸವದ ನಿಮಿತ್ತ ನೂತನ ರಥೋತ್ಸವ ಇದೇ,17 ರಂದು ನೆರವೇರಲಿದ್ದು ಆ ನಿಮಿ ತ್ತ ಕಳಶ ಶುದ್ಧಿ ಹೋಮದ ಸಂದರ್ಭದಲ್ಲಿ ಸ್ಥಳೀಯ ನೂರಾರು ಭಕ್ತರು, ಪ್ರಮು ಖರು, ಮುತ್ತೈದೆಯರು ಆರತಿ ಸಮೇತ ದೇವಿಯರ ದೇಗುಲಕ್ಕೆ ಆಗಮಿಸಿ ಕಳಶಕ್ಕೆ ಪೂಜಿಸಿ, ಅಕ್ಕಿಯನ್ನು ಧಾರೆ ಎರೆವ ಸಂಪ್ರದಾಯ ನೆರ ವೇರಿತು.
ನವದುರ್ಗೆ ಪೂಜೆ: ಮಧ್ಯಾಹ್ನ 1 ಗಂಟೆ ಸುಮಾರಿಗೆ ಚಂಡಿಹೋಮದ ಸಂದರ್ಭದಲ್ಲಿ ಜರುಗಿದ ನವದುರ್ಗೆ (ಬಾಲದುರ್ಗೆ)ಯರ ಪೂಜಿಸಲಾಯಿತು. ಹೋಮಗಳ ಪ್ರಧಾನ ಅರ್ಚಕ ಗಣಪತಿಭಟ್ ಜೋಶಿ, ಪ್ರಾಣೇಶಾಚಾರ್ಯ ಕೆರೂರ ದಂಪತಿ, ದೇವಾಂಗಮಠ ದ ರುದ್ರಮುನಿ ಸ್ವಾಮೀಜಿ, ರಂಗಣ್ಣ ದೇಸಾಯಿ ಇತರೆ ಧಾರ್ಮಿಕ ಪ್ರಮುಖರ ಸಮ್ಮುಖದಲ್ಲಿ 9 ಬಾಲಕಿಯರಿಗೆ (ನವದುರ್ಗೆ) ಶಾಸ್ತ್ರೋಕ್ತವಾಗಿ ಉಡಿ ತುಂಬಿದ ನಂತರ ನೂರಾರು ಸ್ತ್ರೀಯರು ದುರ್ಗೆಯರಿಗೆ ಆರತ ಬೆಳಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.