ADVERTISEMENT

ಸುಂದರ ಬದುಕಿಗೆ ಅಧ್ಯಾತ್ಮ ಅಗತ್ಯ

ಅಯ್ಯಪ್ಪ ಪೂಜೆ, ಅಡ್ಡಪಲ್ಲಕ್ಕಿ ಉತ್ಸವ: ಚನ್ನಸಿದ್ಧರಾಮ ಪಂಡಿತಾರಾಧ್ಯಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 10:45 IST
Last Updated 5 ಜನವರಿ 2017, 10:45 IST

ಬನಹಟ್ಟಿ:  ಇಂದಿನ ನಿತ್ಯದ ಒತ್ತಡದ ಬದುಕಿನಲ್ಲಿ  ಅನೇಕರು ಆಧ್ಯಾತ್ಮದ ಅರಿವಿಲ್ಲದೆ ಬದುಕನ್ನು ಸಾಗಿಸುತ್ತಿದ್ದಾರೆ. ಬದುಕು ಸುಂದರವಾಗಲು ದಿನ ನಿತ್ಯ ಸ್ವಲ್ಪ ಸಮಯವನ್ನು ಆಧ್ಯಾತ್ಮದ ಅರಿವಿಗಾಗಿ ಮತ್ತು ಆಧ್ಯಾತ್ಮದ ಚಿಂತನೆಯಲ್ಲಿ ತೊಡಗಿಕೊಂಡು ಬದುಕನ್ನು ಸುಂದರಗೊಳಿಸಿಕೊಳ್ಳಬೇಕು ಎಂದು ಶ್ರೀಶೈಲದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಸಮೀಪದ ಯಲಟ್ಟಿ ಗ್ರಾಮದಲ್ಲಿ ಮಂಗಳವಾರ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯವರ ಆಶ್ರಯದಲ್ಲಿ ಅಯ್ಯಪ್ಪ ಸ್ವಾಮಿಯ 18ನೇ ವರ್ಷದ ಮಹಾಪೂಜೆ ನಿಮಿತ್ತ ಹಮ್ಮಿಕೊಂಡ ಶ್ರೀಶೈಲದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಭಕ್ತರಿಂದ ಅಡ್ಡಪಲ್ಲಕ್ಕಿ  ಉತ್ಸವ ಸ್ವಿಕರಿಸಿದ ನಂತರ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮಾನವನು ಕೇವಲ ನೀರು ಆಹಾರದಿಂದ ಬದುಕಲಾರನು. ಅವನು ಸಂಪೂರ್ಣ ಮಾನವನಾಗಿ ಬದುಕಬೇಕಾದರೆ ದೈವಿಕ ಅಂಶವೂ ಇರಬೇಕಾಗುತ್ತದೆ. ಹಾಗಾಗಿಯೇ ನಾವು ಕಲ್ಪನೆಗಳನ್ನು ಸೃಷ್ಟಿಸಿ ಅವುಗಳನ್ನು ಮನಃಪೂರ್ವಕವಾಗಿ ಸ್ವಿಕರಿಸಿ ನಮ್ಮ ಜೀವನವನ್ನು ಮುನ್ನಡೆಸಬೇಕು.

ಇದಕ್ಕೂ ಪೂರ್ವದಲ್ಲಿ ಕೊಣ್ಣೂರ ವಿಜ್ಞಾನ ಮಹಾವಿದ್ಯಾಲಯದ ಆವರಣದಿಂದ ಪ್ರಾರಂಭವಾದ  ಅಡ್ಡಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳಗಳೊಂದಿಗೆ ಸಂಚರಿಸಿತು. ಆನೆ ಮೇಲಿನ ಅಯ್ಯಪ್ಪ ಸ್ವಾಮಿ ಕಂಚಿನ ಮೂರ್ತಿಯ ಮೆರವಣಿಗೆ  ಕೂಡಾ ಗಮನ ಸೆಳೆಯಿತು. ಸಾವಿರಕ್ಕೂ ಹೆಚ್ಚು ಮಹಿಳೆಯರು ಕುಂಭ ಹೊತ್ತು ಹಾಗೂ ಆರತಿ ಹಿಡಿದು ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಬನಹಟ್ಟಿ ಹಿರೇಮಠದ  ಶರಣಬಸವ ಶಿವಾಚಾರ್ಯರು, ಹಿರೇಪಡಸಲಗಿಯ ಸಿದ್ದಲಿಂಗ ಸ್ವಾಮೀಜಿ, ಯಲ್ಲಟ್ಟಿಯ ಸುರೇಶ ಮಹಾರಾಜರು, ಜಮಖಂಡಿಯ ಮುತ್ತಿನಕಂತಿ ಮಠದ ಶಿವಲಿಂಗ ಶಿವಾಚಾರ್ಯರು, ಗುಡೂರಿನ ಅನ್ನದಾನ ಶಾಸ್ತ್ರಿಗಳು ಸೇರಿದಂತೆ ಅನೇಕ ಸ್ವಾಮೀಜಿಗಳು ಇದ್ದರು.

ಇದೇ ಸಂದರ್ಭದಲ್ಲಿ ಗ್ರಾಮದ ಅನೇಕ ಹಿರಿಯರು, ಮುಖಂಡರು, ನೂರಕ್ಕೂ ಹೆಚ್ಚು ಅಯ್ಯಪ್ಪಸ್ವಾಮಿ ಭಕ್ತರು ಭಾಗವಹಿಸಿದ್ದರು. ಜಿ.ಎಚ್‌. ಮೋಪಗಾರ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.