ಪಟ್ಟದಕಲ್ಲು (ಬಾದಾಮಿ): ನಮ್ಮ ಪೂರ್ವಜರು ಶ್ರೀಮಂತ ಪರಂಪರೆಯ ಅನೇಕ ಸಾಂಸ್ಕೃತಿಕ ಕುರುಹುಗಳನ್ನು ಬಿಟ್ಟು ಹೋಗಿದ್ದಾರೆ. ಸ್ಮಾರಕಗಳು ಪ್ರಾಚೀನ ಸಂಸ್ಕೃತಿಯ ಹಿರಿಮೆಯನ್ನು ಸಾರುತ್ತಿವೆ. ಸ್ಮಾರಕಗಳ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದು ಇತಿಹಾಸ ಶಂಶೋಧಕ ಡಾ.ಎಸ್.ಐ.ಪತ್ತಾರ ಹೇಳಿದರು.
ಇಲ್ಲಿನ ವಿಶ್ವ ಪರಂಪರೆಯ ತಾಣ ಪಟ್ಟದಕಲ್ಲಿನ ಸ್ಮಾರಕಗಳ ಸಂಕೀರ್ಣದಲ್ಲಿ ಭಾನುವಾರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಆಶ್ರಯದಲ್ಲಿ ಜರುಗಿದ ವಿಶ್ವಪರಂಪರೆ ಸಪ್ತಾಹ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಪೂರ್ವಜರ ಇತಿಹಾಸ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ದೂರದ ದೇಶಗಳಿಂದ ಆಗಮಿಸುವ ವಿದೇಶಿಯರು ಸ್ಮಾರಕಗಳನ್ನು ವೀಕ್ಷಿಸಿ ಅಧ್ಯಯನ ಮಾಡುತ್ತಾರೆ. ನಾವೂ ಸಹ ಸ್ಮಾರಕಗಳ ಮೂರ್ತಿಶಿಲ್ಪ, ಶಾಸನಗಳ ಕುರಿತು ಅಧ್ಯಯನ ಮಾಡಬೇಕು. ನಮ್ಮ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೀತಿಸಬೇಕು’ ಎಂದರು.
‘ಇತಿಹಾಸದ ಬಗ್ಗೆ ಮಕ್ಕಳು ತಿಳಿದುಕೊಳ್ಳಬೇಕು. ಸ್ಮಾರಕಗಳ ಸುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ನೋಡಿಕೊಳ್ಳಬೇಕು. ನಮ್ಮ ಸ್ಮಾರಗಳ ಬಗ್ಗೆ ನಮಗೆ ಹೆಮ್ಮೆ ಇರಬೇಕು’ ಎಂದು ನಿವೃತ್ತ ಮುಖ್ಯ ಶಿಕ್ಷಕ ಸಂಗಯ್ಯ ಹಿರೇಮಠ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ಸುರೇಶಬಾಬು ಇದ್ದರು. ವಿದ್ಯಾರ್ಥಿಗಳಿಗೆ ಸ್ಮಾರಕಗಳ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿ ಬಿ. ಪ್ರಮೋದ ಸ್ವಾಗತಿಸಿದರು. ಎಂ.ಎಸ್. ಮಂಗಳೂರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.