ADVERTISEMENT

ಕುಸಿದ ಇಳುವಳಿ ಹಾಗೂ ಬೆಲೆ– ಆತಂಕದಲ್ಲಿ ಮೆಕ್ಕೆಜೋಳ ಬೆಳೆದ ರೈತ

ವಿ.ಎಂ.ನಾಗಭೂಷಣ
Published 22 ನವೆಂಬರ್ 2017, 6:38 IST
Last Updated 22 ನವೆಂಬರ್ 2017, 6:38 IST
ಸಂಡೂರಿನ ಹೊರವಲಯದ ಕೃಷ್ಣಾನಗರದ ಬಳಿಯಲ್ಲಿ ಮೆಕ್ಕೆಜೋಳವನ್ನು ಒಣಗಿಸುತ್ತಿರುವ ರೈತರು.
ಸಂಡೂರಿನ ಹೊರವಲಯದ ಕೃಷ್ಣಾನಗರದ ಬಳಿಯಲ್ಲಿ ಮೆಕ್ಕೆಜೋಳವನ್ನು ಒಣಗಿಸುತ್ತಿರುವ ರೈತರು.   

ಸಂಡೂರು: ಹಿಂದಿನ ವರ್ಷ ಸಮರ್ಪಕವಾಗಿ ಮಳೆಯಾಗದೆ ಬೆಳೆ ಕೈಗೆ ಹತ್ತದೆ ತೊಂದರೆ ಅನುಭವಿಸಿದ್ದ ರೈತರು, ಈ ಬಾರಿ ಬೆಳೆಗೆ ಅಗತ್ಯವಿರುವಷ್ಟು ಮಳೆಯಾದರೂ, ಒಂದೆಡೆ ಸೈನಿಕ ಹುಳುವಿನ ಬಾಧೆ ಮತ್ತೊಂದೆಡೆ ಬೆಲೆ ಕುಸಿತದಿಂದಾಗಿ ಆತಂಕಕ್ಕೀಡಾಗಿದ್ದಾರೆ.

ಹುಳುವಿನ ಬಾಧೆಯಿಂದ ಇಳುವರಿ ಕುಸಿತ : ಈ ಬಾರಿ ಬೆಳೆಗೆ ಅಗತ್ಯವಿರುವಷ್ಟು ಮಳೆಯಾದರೂ, ಮೆಕ್ಕೆಜೋಳದ ಬೆಳೆ ಕಾಳು ಕಟ್ಟುವ ಹಂತದಲ್ಲಿದ್ದಾಗ ಕಾಡಿದ ಸೈನಿಕ ಹುಳು (ಲದ್ದಿ ಹುಳು)ವಿನ ಬಾಧೆಯಿಂದಾಗಿ ಇಳುವರಿ ಕುಂಟಿತವಾಗಿದೆ. ಮಳೆಯಾಶ್ರಿತ ಜಮೀನಿನಲ್ಲಿ ಎಕರೆಗೆ ಕನಿಷ್ಟ 20–25 ಕ್ವಿಂಟಾಲ್ ಮೆಕ್ಕೆಜೋಳ ಬೆಳೆಯುತ್ತಿದ್ದೆವು. ನೀರಾವರಿ ಜಮೀನಿನಲ್ಲಿ ಎಕರೆಗೆ 25–30 ಕ್ವಿಂಟಾಲ್ ಮೆಕ್ಕೆಜೋಳ ಬೆಳೆಯುತ್ತಾರೆ. ಹುಳುವಿನ ಬಾಧೆಯಿಂದಾಗಿ ಈ ವರ್ಷ ಮಳೆಯಾಶ್ರಿತ ಜಮೀನಿನಲ್ಲಿ ಎಕ್ಕರೆಗೆ 10–15 ಕ್ವಿಂಟಾಲ್ ಇಳುವರಿ ಬಂದಿದೆ ಎನ್ನುತ್ತಾರೆ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಧರ್ಮಾನಾಯ್ಕ.

ಬೆಲೆ ಕುಸಿತ : ಹಿಂದಿನ ವರ್ಷ ಈ ಸಮಯದಲ್ಲಿ 1480–1500 ರೂ.ಗೆ ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಲಾಗುತ್ತಿತ್ತು. ಈ ಬಾರಿ ಸದ್ಯ 1100–1120ಕ್ಕೆ ಕ್ವಿಂಟಾಲ್ ಮೆಕ್ಕೆಜೋಳ ಖರೀದಿ ನಡೆದಿದೆ. ಒಂದು ಎಕರೆಗೆ ಮೆಕ್ಕೆಜೋಳ ಬೆಳೆಯಲು 12–15 ಸಾವಿರ ಖರ್ಚಾಗುತ್ತದೆ. ಆದರೆ ಈಗಿನ ದರದಲ್ಲಿ ಮಾರಾಟ ಮಾಡಿದರೆ, ಹಾಕಿದ ಖರ್ಚು ಕೈಗೆ ಬರಲಾರದು. ಆದರೆ, ಸಾಲಸೋಲ ಮಾಡಿ ಬೆಳೆ ಬೆಳೆದಿದ್ದೇವೆ. ಮಾರಾಟ ಮಾಡಿ ಸಾಲ ತೀರಿಸುವ ಅನಿವಾರ್ಯತೆ ಇದೆ. ರೈತರ ಗೋಳು ಯಾರು ಕೇಳೋರಿಲ್ಲವೆನ್ನುತ್ತಾರೆ ಕೃಷ್ಣಾನಗರದ ರೈತ ಮಹಿಳೆ ಸಿದ್ದಲಿಂಗಮ್ಮ.

ADVERTISEMENT

ಒಂದೆಡೆ ಸೈನಿಕ ಹುಳುವಿನ ಬಾಧೆಯಿಂದ ಮೆಕ್ಕೆಜೋಳದ ಇಳುವರಿ ಕುಂಟಿತವಾಗಿದ್ದರೆ, ಮತ್ತೊಂದೆಡೆ ಬೆಲೆ ಕುಸಿತ ಮೆಕ್ಕೆಜೋಳ ಬೆಳೆದ ರೈತರಲ್ಲಿ ಆತಂಕವನ್ನುಂಟು ಮಾಡಿದೆ. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಬೇಕು ಮತ್ತು ಸಂಡೂರಿನಲ್ಲಿ ಎಪಿಎಂಸಿ ಕಾರ್ಯಾರಂಭ ಮಾಡಬೇಕೆಂಬ ಒತ್ತಾಯ ರೈತರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.