ಎ.ಎಂ. ಸೋಮಶೇಖರಯ್ಯ.
ಕೂಡ್ಲಿಗಿ: ತಾಲ್ಲೂಕಿನ ಚೌಡಾಪುರ ಗ್ರಾಮ ಪಂಚಾಯ್ತಿ ಕಚೇರಿ ಆವರಣದಲ್ಲಿರುವ ಮೇಲ್ಮಟ್ಟದ ನೀರು ಸಂಗ್ರಹಾಗಾರ ಶಿಥಿಲಗೊಂಡಿದ್ದು, ಯಾವ ಕ್ಷಣದಲ್ಲಾದರೂ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಸುತ್ತಮುತ್ತಲಿನ ನಿವಾಸಿಗಳು ಆತಂಕದಲ್ಲೇ ದಿನಗಳನ್ನು ದೂಡುತ್ತಿದ್ದಾರೆ.
1996ರಲ್ಲಿ ನಿರ್ಮಾಣಗೊಂಡಿರವ ಟ್ಯಾಂಕ್ ಸುಮಾರು 50,000 ಲೀಟರ್ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಸುಮಾರು ಕೆಲವು ವರ್ಷಗಳಿಂದ ನಿರುಪಯುಕ್ತವಾಗಿದೆ. ಪರಿಣಾಮವಾಗಿ, ಪಿಲ್ಲರ್ ನಿರ್ಮಾಣಕ್ಕೆ ಬಳಸಿರುವ ಕಾಂಕ್ರಿಟ್ ಕಳಚಿ ಬೀಳುತ್ತಿದೆ. ಕಬ್ಬಿಣವೂ ತುಕ್ಕು ಹಿಡಿದಿದ್ದು, ಕುಸಿದುಬಿದ್ದು ದೊಡ್ಡ ಅನಾಹುತ ಸಂಭವಿಸುವ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ.
ಈ ಗ್ರಾಮವೂ ಸೇರಿ ಸೂಲದಹಳ್ಳಿ, ನಿಂಬಳಗೆರೆ ಮತ್ಉ ಹಾರಕಭಾವಿ ಗ್ರಾಮದಿಂದ ತಾಲ್ಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಪಕ್ಕವೇ ಟ್ಯಾಂಕ್ ಇದ್ದು, ಸುತ್ತಮುತ್ತ ಅನೇಕ ಮನೆಗಳಿವೆ. ರಸ್ತೆಯ ಪಕ್ಕದಲ್ಲಿಯೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಪ್ರೌಧ ಶಾಲೆಯ ನೂರಾರು ವಿದ್ಯಾರ್ಥಿಗಳು ಇದೇ ರಸ್ತೆಯ ಮೂಲಕ ಸಂಚರಿಸುತ್ತಾರೆ.
‘ಅನಾಹುತ ಸಂಭವಿಸುವ ಮೊದಲು ಅದನ್ನು ತೆರವುಗೊಳಿಸಬೇಕು’ ಎಂದು ಗ್ರಾಮದ ಎಂ. ಸಿದ್ಲಿಂಗಪ್ಪ ಆಗ್ರಹಿಸಿದರು. ‘ಶಿಥಿಲಗೊಂಡಿರುವ ಟ್ಯಾಂಕ್ ತೆರವು ಮಾಡುವಂತೆ ತಾಲ್ಲೂಕು ಪಂಚಾಯ್ತಿಗೆ ಹಾಗೂ ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗಕ್ಕೆ 2014ರಲ್ಲಿಯೇ ಪತ್ರ ಬರೆದು ಮನವಿ ಮಾಡಲಾಗಿದೆ’ ಎಂದು ಅಭಿವೃದ್ಧಿ ಅಧಿಕಾರಿ ಮಹಮದ್ ಖದೀರ್ ತಿಳಿಸಿದರು.
* *
ಟ್ಯಾಂಕನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ
ಎನ್.ಸತೀಶ್ ರೆಡ್ಡಿ ಇ.ಒ, ಕೂಡ್ಲಿಗಿ ತಾಲ್ಲೂಕು ಪಂಚಾಯ್ತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.