ಹಗರಿಬೊಮ್ಮನಹಳ್ಳಿ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಾಕಿದ್ದ ಅಖಾಡದಲ್ಲಿ ಗುರುವಾರ ನಡೆದ ರೋಚಕ ಕುಸ್ತಿ ಪಂದ್ಯಾವಳಿಯಲ್ಲಿ ಮಹಾರಾಷ್ಟ್ರ, ದಾವಣಗೆರೆ ಮತ್ತು ಜಿಲ್ಲೆಯ ಕುಸ್ತಿಪಟುಗಳು ಕುಸ್ತಿಪ್ರಿಯರಿಗೆ ರಸದೌತಣ ಉಣಬಡಿಸಿದರು.
ಕುಸ್ತಿ ಆರಂಭವಾಗುತ್ತಿದ್ದಂತೆ ಪ್ರೇಕ್ಷಕರು ಕೇಕೆ ಹಾಕಿ ಕುಸ್ತಿಪಟುಗಳನ್ನು ಹುರಿದುಂಬಿಸಿದರು. ಪರ್ಸಿಪೈಕಿ ನಡೆದ ಕುಸ್ತಿಯಲ್ಲಿ ಪ್ರೇಕ್ಷಕರು ಇನ್ನೇನು ಕುಸ್ತಿ ಆರಂಭವಾಯಿತು, ಎಂದು ಕಣ್ಣು ಬಿಡು ವಷ್ಟರಲ್ಲಿ ಮರಿಯಮ್ಮನಹಳ್ಳಿ ಸೈಫುಲ್ಲಾ ರನ್ನು ಮಹಾರಾಷ್ಟ್ರದ ಕೊಲ್ಲಾಪುರದ ಅನುಭವಿ ಪೈಲ್ವಾನ್ ಸಚಿನ್ ಮಣ್ಣು ಮಾಡಿ, ಗೆಲುವಿನ ನಗೆ ಬೀರಿದರು.
ಪಕ್ಕೀರಪ್ಪ ಮತ್ತು ಸಂಗಡಿಗರ ಹಲಗೆ ವಾದನ ಅಖಾಡದಲ್ಲಿದ್ದ ಕುಸ್ತಿ ಪಟುಗಳನ್ನು ಹುರಿದುಂಬಿಸುವಂತಿತ್ತು.. ಇದಕ್ಕೂ ಮೊದಲು ಹರಪನಹಳ್ಳಿಯ ಕೆಂಚಪ್ಪ, ಕೊಲ್ಲಾಪುರದ ರಾಜು ವಿರುದ್ಧ ಜಯಗಳಿಸಿದರು. ಸೊಲ್ಲಾಪುರದ ಪೈಲ್ವಾನ್ಗೆ ಹರಪನಹಳ್ಳಿ ಶಂಭು ಸೋಲುಣಿಸಿದರು.
ಧಾರವಾಡದ ಫಕ್ಕೀರಪ್ಪ, ಇಂಗಳ ಗಿಯ ಖಾಸೀಂ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ವಿಜಯದ ಪಟ್ಟು ಹಾಕಿದರು. ಒಟ್ಟು 30ಕ್ಕೂ ಹೆಚ್ಚು ಕುಸ್ತಿಪಟುಗಳು ಅಖಾಡದಲ್ಲಿ ಕಾದಾಡಿ ಕುಸ್ತಿಯ ಸೊಬಗು ಹೆಚ್ಚಿಸಿದರು.
ಪರ್ಸಿ ಪೈಕಿ ಕುಸ್ತಿಗೆ ಶಾಸಕ ಭೀಮಾನಾಯ್ಕ ಚಾಲನೆ ನೀಡಿ, ವಿಜಯನಗರ ಅರಸರ ಕಾಲದಿಂದಲೂ ಕುಸ್ತಿ ಅತ್ಯಂತ ಜನಪ್ರೀಯ ಕ್ರೀಡೆ ಆಗಿದೆ. ಯುವಕರು ಕುಸ್ತಿಪಟುಗಳಾಗದ್ದಿದ್ದರೂ ಕನಿಷ್ಠ ದುಶ್ಚಟಗಳಿಂದ ದೂರ ಉಳಿ ಯುವ ಮೂಲಕ ಆರೋಗ್ಯವಂತರಾಗ ಬೇಕಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಹೂಗಾರ ಮಲ್ಲಿಕಾರ್ಜುನ, ಪುರಸಭೆ ಅಧ್ಯಕ್ಷ ಜೋಗಿ ಹನುಮಂತಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಯು .ಬಾಬುವಲಿ, ಸದಸ್ಯ ಹುಳ್ಳಿ ಮಂಜುನಾಥ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜಿ.ಹನುಮಂತಪ್ಪ, ಮುಖಂಡರಾದ ಬಂಗಾರಿ ಗಾಳಿರಾಜ, ಬಾಪೂಜಿ ಇದ್ದರು. ಹುಳ್ಳಿ ಪ್ರಕಾಶ್, ಜೋಗಿ ಹನುಮಂತಪ್ಪ ನಿರ್ವಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.