ಹೊಸಪೇಟೆ: ‘ಲಂಬಾಣಿ ತಾಂಡಾ ಗಳನ್ನು ಕಂದಾಯ ಗ್ರಾಮಗಳಾಗಿ ಬದಲಾಯಿಸಬೇಕು’ ಎಂದು ಆಗ್ರಹಿಸಿ ಲಂಬಾಣಿ ಸಮುದಾಯದವರು ಭಾನುವಾರ ನಗರದ ಅಂಚೆ ಕಚೇರಿ ಎದುರು ಪತ್ರ ಚಳವಳಿ ನಡೆಸಿದರು.
ರಾಷ್ಟ್ರಪತಿ ಅವರ ಹೆಸರಿಗೆ ಬರೆದ ಅಂಚೆ ಪತ್ರಗಳನ್ನು ಅಂಚೆ ಪೆಟ್ಟಿಗೆಗಳಲ್ಲಿ ಹಾಕಿ, ವಿನೂತನವಾಗಿ ಪ್ರತಿಭಟನೆ ನಡೆಸಿದರು.
‘ಸ್ವಾತಂತ್ರ್ಯ ದೊರೆತು 70 ವರ್ಷಗಳಾಗುತ್ತ ಬಂದರೂ ಲಂಬಾಣಿ ತಾಂಡಾಗಳು ಕಂದಾಯ ಗ್ರಾಮಗಳಾಗಿ ಬದಲಾಗಿಲ್ಲ. ಇದರಿಂದ ತಾಂಡಾಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗಿಲ್ಲ. ರಸ್ತೆ, ಸಾರಿಗೆ ಸಂಪರ್ಕ, ಸರ್ಕಾರಿ ಕಚೇರಿ, ವಿದ್ಯುತ್, ಶುದ್ಧ ಕುಡಿಯುವ ನೀರು, ಆಸ್ಪತ್ರೆ, ಅಂಗನವಾಡಿ, ಪಂಚಾಯ್ತಿ ಸೇರಿದಂತೆ ಯಾವುದೂ ಇಲ್ಲ.
ಎಷ್ಟೋ ಜನರು ಅರಣ್ಯಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಅವರಿಗೆ ಹಕ್ಕುಪತ್ರ ನೀಡಿಲ್ಲ. ಹೀಗಾಗಿ ಅವರು ಅತಂತ್ರ ಸ್ಥಿತಿಯಲ್ಲಿದ್ದಾರೆ’ ಎಂದು ಮನವಿಯಲ್ಲಿ ವಿವರಿಸಲಾಗಿದೆ.
‘ಜನವಸತಿಗೆ ಶಾಶ್ವತವಾದ ನೆಲೆಯಿಲ್ಲದ ಕಾರಣ ಈಗಲೂ ಲಂಬಾಣಿ ಸಮುದಾಯದವರು ಅಲೆಮಾರಿಗಳಂತೆ ಜೀವನ ನಡೆಸುತ್ತಿದ್ದಾರೆ. ಕಂದಾಯ ಗ್ರಾಮಗಳಾಗಿ ಘೋಷಿಸಿದರೆ ಅಲ್ಲಿ ಸರ್ಕಾರದಿಂದ ಎಲ್ಲ ಸವಲತ್ತುಗಳು ಸಿಗುತ್ತವೆ.
ಜನ ಗುಳೇ ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ರಾಜ್ಯ ಸರ್ಕಾರ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಬದಲಾಯಿಸಲು ಈಗಾಗಲೇ ವಿಧಾನಸಭೆಯಲ್ಲಿ ಮಸೂದೆ ಮಂಡಿಸಿದೆ. ಅಷ್ಟೇ ಅಲ್ಲ, ರಾಷ್ಟ್ರಪತಿ ಅವರ ಅಂಕಿತಕ್ಕೆ ಕಳುಹಿಸಿದೆ. ರಾಷ್ಟ್ರಪತಿಯವರು ವಿಳಂಬ ಮಾಡದೇ ಕೂಡಲೇ ಮಸೂದೆಗೆ ಅಂಕಿತ ಹಾಕಬೇಕೆಂದು’ ಕೋರಲಾಗಿದೆ.
ರಾಮಜೀ ನಾಯ್ಕ, ಶಿವರಾಮ್ ನಾಯ್ಕ, ಬಿ.ಡಿ. ವೆಂಕಟೇಶ್ ನಾಯ್ಕ, ಚಂದ್ರಶೇಖರ್ ನಾಯ್ಕ ಸೇರಿದಂತೆ ಪಾಲ್ಗೊಂಡಿದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.