ADVERTISEMENT

’ಶೇಷಗಿರಿರಾವ್ ಹೋರಾಟದ ಬದುಕು ಮಾದರಿ’

ಗವಿಮಠದಲ್ಲಿ ಸ್ವರ ನಮನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 6:05 IST
Last Updated 16 ಏಪ್ರಿಲ್ 2018, 6:05 IST
ಹೂವಿನಹಡಗಲಿ ಪಟ್ಟಣದ ಗವಿಮಠದಲ್ಲಿ ಆಯೋಜಿಸಿದ್ದ ನುಡಿನಮನ ಕಾರ್ಯ ಕ್ರಮದಲ್ಲಿ ಸಾಹಿತಿ ಎಚ್.ಶೇಷಗಿರಿರಾವ್ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು
ಹೂವಿನಹಡಗಲಿ ಪಟ್ಟಣದ ಗವಿಮಠದಲ್ಲಿ ಆಯೋಜಿಸಿದ್ದ ನುಡಿನಮನ ಕಾರ್ಯ ಕ್ರಮದಲ್ಲಿ ಸಾಹಿತಿ ಎಚ್.ಶೇಷಗಿರಿರಾವ್ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು   

ಹೂವಿನಹಡಗಲಿ : ‘ಬಂಡಾಯದ ಹಾದಿಯಲ್ಲಿ ಸಾಗಿ ಬಂದ ಚಿಂತಕ ಶೇಷಗಿರಿರಾವ್ ಹವಾಲ್ದಾರ್ ಅವರ ಹೋರಾಟದ ಬದುಕು ಮಾದರಿಯಾಗಿದೆ’ ಎಂದು ಸಿಪಿಐಎಂ ರಾಜ್ಯ ಸಂಘಟಕರಾದ ಎಸ್.ವೈ.ಗುರುಶಾಂತ ಹೇಳಿದರು.

ಪಟ್ಟಣದ ಗವಿಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಹಿತಿ ಕವಿ ಶೇಷಗಿರಿರಾವ್ ಹವಾಲ್ದಾರ್ ನುಡಿ ಮತ್ತು ಸ್ವರ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಕಳಕಳಿ, ವೈಚಾರಿಕ ಚಿಂತನೆಗಳನ್ನು ಬೆಳೆಸಿಕೊಂಡಿದ್ದ ಶೇಷಗಿರಿರಾವ್ ಅವರು ಕನ್ನಡ ಕಾವ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಅಕಾಲಿಕ ನಿಧನದಿಂದ ಎಡಪಂಥೀಯ ಹೋರಾಟಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ ಎಂದರು.

ಪ್ರಾಧ್ಯಾಪಕ ಶಾಂತಮೂರ್ತಿ ಕುಲಕರ್ಣಿ ಮಾತನಾಡಿ, ಜಾತ್ಯಾತೀತ ತತ್ವಗಳಲ್ಲಿ ನಂಬಿಕೆ ಇರಿಸಿದ್ದ ಶೇಷಗಿರಿರಾವ್ ಅವರು ತಾವು ನಂಬಿದ್ದ ಸಿದ್ದಾಂತಗಳನ್ನೇ ಉಸಿರಾಗಿಸಿಕೊಂಡು ಬದುಕಿದವರು. ಸ್ನೇಹ ಜೀವಿಯಾಗಿ ಸಮಾಜದ ಎಲ್ಲರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ಸ್ಮರಿಸಿದರು.

ADVERTISEMENT

ಡಾ.ವಸುದೇಂದ್ರ ಮಾತನಾಡಿ, ರಾವ್ ಆರೋಗ್ಯದ ವೈಫಲ್ಯದ ನಡುವೆಯೂ ಅವರ ನಡೆದ ದಾರಿ ವಿಸ್ಮಯವಾಗಿದೆ ಎಂದು ಹೇಳಿದರು.

ನಿವೃತ್ತ ಶಿಕ್ಷಣಾಧಿಕಾರಿ ಎಚ್.ಎಂ.ಬೆಟ್ಟಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ರೈತ ಸಂಘದ ಮುಖಂಡ ಜೆ.ಎಂ. ವೀರಸಂಗಯ್ಯ, ಕೃಷ್ಣಮೂರ್ತಿ, ಸಾಹಿತಿ ಬಸವರಾಜ, ಹಿರಿಯರಾದ ಎಚ್.ಎಂ.ವಿಶ್ವನಾಥಯ್ಯ, ಸುಮಾ ವಿಜಯ ಮಾತನಾಡಿದರು. ಕಲಾವತಿ ಶೇಷಗಿರಿರಾವ್ ಉಪಸ್ಥಿತರಿದ್ದರು.

ಸಂಗೀತ ಕಲಾವಿದರಾದ ಅಕ್ಕಸಾಲಿ ಕಾಳಪ್ಪ, ಕರುಣಾನಿಧಿ, ನಾಗರಾಜ ಪತ್ತಾರ್, ಜಯಶ್ರೀ, ಗುಲಾಬ್‌ ಜಾನ್, ಶ್ರೀಲತಾ, ಎಚ್.ಎಂ.ಲಾವಣ್ಯ, ಎಚ್.ರೇಖಾ, ಪ್ರಕಾಶ್‌ ಜೈನ್, ಕೆ.ವಿ.ವಿಸ್ಮಯ, ಬಸಮ್ಮ ಅವರು ಸ್ವರ ನಮನ ಸಲ್ಲಿಸಿದರು.

**

ಸದಾ ಸಾಮಾಜಿಕ ಒಳಿತಿಗಾಗಿ ಮಿಡಿಯುತ್ತಿದ್ದ ಅವರು ಇನ್ನೂ ಕೆಲಕಾಲ ನಮ್ಮ ನಡುವೆ ಇರಬೇಕಿತ್ತು – ಡಾ.ವಸುಧೇಂದ್ರ, ಸಾಹಿತಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.