ADVERTISEMENT

ಹಂಪಾ‍ಪಟ್ಟಣದಲ್ಲಿ ದುರುಗಮ್ಮ ಜಾತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 10:21 IST
Last Updated 24 ಜನವರಿ 2018, 10:21 IST

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಹಂಪಾಪಟ್ಟಣದ ಗ್ರಾಮದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಎರಡು ದಿನ ನಡೆಯುವ ದುರುಗಮ್ಮ ದೇವಿ ಜಾತ್ರೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಬೆಳಗಿನ ಜಾವ ದೇವಿಗೆ ಪಂಚಾಮೃತ ಅಭಿಷೇಕ ಮಾಡಿದ ಬಳಿಕ ಗ್ರಾಮದ ಪ್ರಧಾನ ಅರ್ಚಕ ವೇದಮೂರ್ತಿ ಸತ್ಯನಾರಾಯಣಾಚಾರ್‌ ನೇತೃತ್ವದಲ್ಲಿ ವೇದಮೂರ್ತಿ ರಮೇಶಾಚಾರ್‌ ವಂದಾಲಿ ಮತ್ತು ಮಧುಸೂಧನ ಆಚಾರ್‌ ಅವರಿಂದ ದುರ್ಗಾ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ಇದಕ್ಕೂ ಮುನ್ನ ಗ್ರಾಮದ ಮುಖಂಡರು ಗಂಗಾಪೂಜೆ ನೆರವೇರಿಸಿ ಉತ್ಸವ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪಿಸಿದರು. ಮಹಿಳೆಯರು ಪೂರ್ಣಕುಂಭ ಮತ್ತು ಕಳಸಗಳೊಂದಿಗೆ ಭಾಗವಹಿಸಿದ್ದರು. ಜಾನಪದ ಕಲಾತಂಡಗಳ ಮೆರವಣಿಗೆ ಮೆರಗು ನೀಡಿತು. ಸುಮಾರು 100 ವರ್ಷಗಳ ಇತಿಹಾಸ ಇರುವ ದೇಗುಲಕ್ಕೆ ಗ್ರಾಮದ ಎಲ್ಲ ಜಾತಿ ಜನಾಂಗದವರು ಪೂಜೆ ಸಲ್ಲಿಸಿದ್ದು ವಿಶೇಷ.

ADVERTISEMENT

ದೇವಿಯ ಉದ್ಭವ ಮೂರ್ತಿ ಇದ್ದು ಅದನ್ನೇ ಪ್ರತಿಷ್ಠಾಪಿಸಲಾಗಿದೆ, ಲಕ್ಷಾಂತರ ರೂಪಾಯಿ ಮೊತ್ತದಲ್ಲಿ ದೇಗುಲವನ್ನು ನವೀಕರಿಸಲಾಗಿದೆ. ಈ ವರ್ಷ ಗ್ರಾಮದಲ್ಲಿ ಉತ್ತಮ ಮಳೆಯಾದ ಕಾರಣ ಕೆರೆಕಟ್ಟೆಗಳು ತುಂಬಿವೆ. ಇದರಿಂದಾಗಿ ಉತ್ತಮ ಬೆಳೆಗಳು ಬಂದಿವೆ. ಆದ್ದರಿಂದ ಜಾತ್ರೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಮಹೋತ್ಸವ ಸಮಿತಿಯ ಎಚ್‌. ಭೀಮಪ್ಪ, ಜಿ.ತಿಮ್ಮಣ್ಣ, ಬಣಕಾರ ಬಸವರಾಜ, ಬುಡ್ಡಿ ಬಸವರಾಜ, ಎಸ್‌.ಹುಲುಗಪ್ಪ ತಿಳಿಸಿದರು. ದೇವಿ ಮೂರ್ತಿಯನ್ನು ₹1.25ಲಕ್ಷ ವೆಚ್ಚದಲ್ಲಿ ತಯಾರಿಸಲಾದ ಬೆಳ್ಳಿ ಕವಚಗಳಿಂದ ಅಲಂಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.