ಬಳ್ಳಾರಿ: ಲಾರಿಯನ್ನು ಅಕ್ರಮವಾಗಿ ಅಡ್ಡಗಟ್ಟಿದ ಬಳಿಕ ಅದನ್ನು ಬಿಡಲು ಚಾಲಕ ಪರಮೇಶ್ವರ್ ಎಂಬುವವರಿಂದ ₹5 ಸಾವಿರ ಲಂಚ ಪಡೆಯುತ್ತಿದ್ದ ಸಂಚಾರ ಠಾಣೆಯ ಕಾನ್ಸ್ಟೆಬಲ್ ಕೃಷ್ಣ ಗಡಿ ಎಂಬುವವರು ಇಲ್ಲಿನ ಠಾಣೆಯಲ್ಲಿ ಭ್ರಷ್ಟಾಚಾರ ನಿಗ್ರಹದ ದಳದ ಅಧಿಕಾರಿಗಳಿಗೆ ಬುಧವಾರ ಸಿಕ್ಕಿಬಿದ್ದಿದ್ದಾರೆ.
ಕೈಗಾರಿಕಾ ಸಾಮಗ್ರಿಗಳ ದಾಸ್ತಾನಿದ್ದ ಲಾರಿಯು ಪುಣೆಯಿಂದ ಚಿತ್ತೂರಿಗೆ ತೆರಳಲು ಮಂಗಳವಾರ ನಗರದ ಮೂಲಕ ಹಾದು ಹೋಗುವ ಸಂದರ್ಭದಲ್ಲಿ ಕಾನ್ಸ್ಟೆಬಲ್ ಲಾರಿಯನ್ನು ಅಡ್ಡಗಟ್ಟಿ ಠಾಣೆಗೆ ಕರೆತಂದು ನಿಲ್ಲಿಸಿದ್ದರು. ಲಾರಿಯನ್ನು ಬಿಡಲು ಅವರು ಲಂಚಕ್ಕೆ ಆಗ್ರಹಿಸಿದ್ದರು. ಅದಕ್ಕೆ ಒಪ್ಪದ ಚಾಲಕ ಎಸಿಬಿ ಅಧಿಕಾರಿಗಳಿಗೆ ದೂರುನೀಡಿದ್ದರು.
‘ಸಮರ್ಕ ದಾಖಲೆಗಳಿದ್ದರೂ ಲಾರಿ ಬಿಡದೆ ಕಾನ್ಸ್ಟೆಬಲ್ ಹಣಕ್ಕೆ ಒತ್ತಾಯಿಸುತ್ತಿದ್ದಾರೆ ಎಂದ ಚಾಲಕ ದೂರು ನೀಡಿದ್ದರು. ಅದರ ಅನ್ವಯ ಎಸ್ಪಿ ಪ್ರಸನ್ನ ದೇಸಾಯಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ರೂಪಿಸಲಾಗಿತ್ತು. ಬುಧವಾರ ಬೆಳಿಗ್ಗೆ 8ರ ವೇಳೆಗೆ ಚಾಲಕನಿಂದ ಹಣ ಪಡೆಯುತ್ತಿದ್ದಾಗಲೇ ಕಾನ್ಸ್ಟೆಬಲ್ ಸಿಕ್ಕಿಬಿದ್ದರು’ ಎಂದು ಎಸಿಬಿ ಡಿವೈಎಸ್ಪಿ ಅರುಣ್ಕುಮಾರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.