ಆನೇಕಲ್: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರಯತ್ನದ ಫಲವಾಗಿ ಆನೇಕಲ್ ತಾಲ್ಲೂಕಿನ ಮಾಯಸಂದ್ರದ ಮುತ್ಯಾಲಮ್ಮ ಕೆರೆಯನ್ನು ಈ ವರ್ಷ ಪುನಶ್ಚೇತನಗೊಳಿಸಿದ್ದು ಮಳೆಯಿಂದಾಗಿ ಕೆರೆಯಲ್ಲಿ ನೀರು ತುಂಬಿದ್ದು ಜನರಲ್ಲಿ ಸಂತಸ ತಂದಿದೆ.
ಕೆರೆಗಳು ಗ್ರಾಮಗಳ ಜೀವನಾಡಿ ಗಳು ಆದರೆ ಇತ್ತೀಚಿನ ದಿನಗಳಲ್ಲಿ ರಾಜಕಾಲುವೆಗಳ ಒತ್ತುವರಿ ಹಾಗೂ ಕೆರೆಯ ಮೂಲಗಳ ತಡೆ ಮತ್ತಿತರ ಕಾರಣಗಳಿಂದಾಗಿ ಕೆರೆ"
ಗಳು ನೀರಿಲ್ಲದೇ ಬರಿದಾಗಿ ಕೆರೆಯು ಪಳೆಯುಳಿಕೆಯಾಗಿ ಉಳಿದಿ ರುವುದೇ ಹೆಚ್ಚು.
‘ನಮ್ಮ ಊರು ನಮ್ಮ ಕೆರೆ’ ಯೋಜನೆಯಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮುತ್ಯಾಲಮ್ಮ ಕೆರೆಯನ್ನು ಆಯ್ಕೆ ಮಾಡಿಕೊಂಡು ಗ್ರಾಮಸ್ಥರ ಸಮಿತಿಯನ್ನು ಆಯ್ಕೆ ಮಾಡಿ ಕೆರೆ ಅಭಿವೃದ್ಧಿ ಸಮಿತಿ ರಚನೆ ಮಾಡಿಕೊಂಡು ಕೆರೆಯಲ್ಲಿ ಹೂಳೆತ್ತುವ ಕಾರ್ಯ ಪ್ರಾರಂಭ ಮಾಡಲಾಯಿತು.
ಕೆರೆಗಳಿಂದ ತೆಗೆಯಲಾದ ಸುಮಾರು 4600 ಲೋಡ್ ಹೂಳನ್ನು ರೈತರು ತಮ್ಮ ಜಮೀನುಗಳಿಗೆ ಹಾಕಿಕೊಂಡರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಕೆರೆ ಹೂಳೆತ್ತಲು ಹಾಗೂ ಅಭಿವೃದ್ಧಿ ಪಡಿಸಲು ₹ 8 ಲಕ್ಷ ಅನುದಾನ ನೀಡಲಾಯಿತು.
ಗ್ರಾಮಸ್ಥರ ನೆರವಿನಿಂದ ಸುಮಾರು ₹ 25 ಲಕ್ಷ ವೆಚ್ಚದ ಕಾಮಗಾರಿ ಕೈಗೊಂಡು ಕೆರೆಯನ್ನು ಅಭಿವೃದ್ಧಿ ಪಡಿಸಲಾಯಿತು. ಕೆರೆಯ ಸುತ್ತಲೂ ಪರಿಸರ ಸಂರಕ್ಷಣೆಗಾಗಿ 300ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದ್ದು ಜನರ ಸಹಭಾಗಿತ್ವದಿಂದ ಕೆರೆಗೆ ಜೀವ ತುಂಬಲಾಗಿದೆ ಎಂದು ಕೆರೆ ಅಭಿವೃದ್ಧಿ ಯೋಜನೆಯ ಸದಸ್ಯ ಗೋಪಾಲ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.