ಆನೇಕಲ್: ಗಿಡಗಳು, ಪ್ಲಾಸ್ಟಿಕ್, ತ್ಯಾಜ್ಯದಿಂದ ತುಂಬಿ ನೀರೇ ಕಾಣಿಸದಷ್ಟು ಕಲುಷಿತವಾಗಿದ್ದ ಕೆರೆಯೊಂದನ್ನು ಆನೇಕಲ್ ಉಪವಿಭಾಗದ ಪೊಲೀಸರು ಡಿವೈಎಸ್ಪಿ ಎಸ್.ಕೆ.ಉಮೇಶ್ ಅವರ ನೇತೃತ್ವದಲ್ಲಿ ಸ್ವಚ್ಛಗೊಳಿಸುವ ಮೂಲಕ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಮಾಡಿದ್ದಾರೆ.
ಆನೇಕಲ್ ಬನ್ನೇರುಘಟ್ಟ ರಸ್ತೆಯ ಹರಪನಹಳ್ಳಿ ಕೆರೆಯು ಸುಮಾರು 3ಎಕರೆ ವಿಸ್ತೀರ್ಣವಿದ್ದು ಸುತ್ತಮುತ್ತಲೂ ಕೈಗಾರಿಕಾ ಪ್ರದೇಶವಿರುವುದರಿಂದ ಗ್ರಾನೈಟ್ ತ್ಯಾಜ್ಯ, ಪ್ಲಾಸ್ಟಿಕ್ ಸೇರಿದಂತೆ ಕಸವನ್ನು ಕೆರೆಗೆ ತುಂಬಿ ಕಸದ ಗುಂಡಿಯಾಗಿ ಮಾಡಲಾಗಿತ್ತು.
ಆನೇಕಲ್ ಉಪವಿಭಾಗದ ಆನೇಕಲ್, ಅತ್ತಿಬೆಲೆ, ಸರ್ಜಾಪುರ, ಹೆಬ್ಬಗೋಡಿ, ಬನ್ನೇರುಘಟ್ಟ, ಸೂರ್ಯಸಿಟಿ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ಗಳು, ಪಿಎಸ್ಐಗಳು ಹಾಗೂ ಪೊಲೀಸ್ ಸಿಬ್ಬಂದಿಯೊಡಗೂಡಿ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು, ಕಾಲೇಜುಗಳ ವಿದ್ಯಾರ್ಥಿಗಳು, ಕಾರ್ಮಿಕರೊಡಗೂಡಿ ದೊಡ್ಡ ಪಡೆಯನ್ನೇ ಕಟ್ಟಿಕೊಂಡು 7 ಜೆಸಿಬಿಗಳು, ಹತ್ತಕ್ಕೂ ಹೆಚ್ಚು ಟ್ರಾಕ್ಟರ್ಗಳೊಂದಿಗೆ ಕೆಲಸ ಪ್ರಾರಂಭಿಸಿ ಎರಡು ದಿನಗಳ ಕಾಲ ಶ್ರಮ ವಹಿಸಲಾಯಿತು.
ಇದರಿಂದ ಸುಂದರ ಕೆರೆಯಾಗಿ ಇದು ನಮ್ಮೂರ ಕೆರೆಯೇ ಎನ್ನುವಷ್ಟು ಸ್ವಚ್ಛಗೊಂಡಿದೆ. ಕೆರೆಯ ಸ್ವಚ್ಛತಾ ಕಾರ್ಯಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಭೀಮಾಶಂಕರ್ ಗುಳೇದ್ ಚಾಲನೆ ನೀಡಿದರು.
ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ್ ಬಾಲ್ದಂಡಿ, ಸರ್ಕಲ್ ಇನ್ಸ್ಪೆಕ್ಟರ್ಗಳಾದ ಮೋಹನ್, ಜಗದೀಶ್, ಆನಂದ್ನಾಯ್ಕ್, ಸಿದ್ದೇಗೌಡ, ಸಬ್ ಇನ್ಸ್ಪೆಕ್ಟರ್ಗಳಾದ ಹೇಮಂತ್ಕುಮಾರ್, ನವೀನ್, ಮುರಳಿ, ಮಂಜುನಾಥ್ ರೆಡ್ಡಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.