ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಎರಡನೇ ಸುತ್ತಿನಲ್ಲಿ ರಾಸುಗಳಿಗೆ ಮೇವು ವಿತರಣೆ ನಡೆಯುತ್ತಿದ್ದು ಕಸಬಾ ಹೋಬಳಿ ವ್ಯಾಪ್ತಿಯ ಮೇವು ಸಂಗ್ರಹಣೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದೇ ಇರುವುದರಿಂದ ಮಳೆಗೆ ಸಿಲುಕಿ ಕೊಳೆತು ಹೋಗಿದೆ ಎಂದು ರಾಜ್ಯ ರೈತ ಸಂಘದ ಮುಖಂಡ ಕೆ.ಪಿ.ಕುಮಾರ್ ದೂರಿದ್ದಾರೆ.
ಸೋಮವಾರ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಸಂಗ್ರಹಿಸಿಡಲಾಗಿರುವ ಮೇವು ಖರೀದಿಸಲು ಬಂದಿರುವ ರೈತರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಿಡಿ ಶಾಪಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮೇವು ಸಂಗ್ರಹಣೆ ಮಾಡಿದ ಕನಿಷ್ಠ ಐದಾರು ದಿನಗಳಲ್ಲಿಯೇ ರೈತರಿಗೆ ವಿತರಣೆ ಮಾಡಿದ್ದರೆ ರೈತರು ಸೂಕ್ತರೀತಿಯಲ್ಲಿ ಸಂಗ್ರಹಣೆ ಮಾಡಿಟ್ಟುಕೊಳ್ಳುತ್ತಿದ್ದರು. ಈ ಹಿಂದೆಯೂ ಸಹ ಕಸಬಾ ಹೋಬಳಿ ಮೇವು ಸಂಗ್ರಹಣೆ ಕೇಂದ್ರದಲ್ಲಿ ಸೂಕ್ತ ರೀತಿಯಲ್ಲಿ ಮೇವನ್ನು ಸಂಗ್ರಹಿಸದೇ ಕೊಳೆತು ಹೋಗಿರುವ ಮೇವನ್ನು ವಿತರಣೆ ಮಾಡಿದಾಗ ರೈತರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಮುಂದಿನದಿನಗಳಲ್ಲಿ ಈ ರೀತಿ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದ್ದರು.
ಇಷ್ಟಾದರು ಸಹ ಎರಡನೇ ಬಾರಿ ಈಗ ಹಿಂದಿನ ತಪ್ಪನ್ನೇ ಮಾಡಿದ್ದು ಸಂಗ್ರಹಣೆ ಮಾಡಲಾಗಿರುವ ಮೇವು ಮಳೆಗೆ ಸಿಲುಕಿ ಕೊಳೆತು ಹೋಗಿದೆ ಎಂದು ದೂರಿದರು.
ಆದರೆ ಸರ್ಕಾರದ ಆದೇಶ ಬರುವವರೆಗೂ ಮೇವು ವಿತರಣೆ ಮಾಡುವಂತಿಲ್ಲ. ಅದರೂ ಮೇವು ಅಷ್ಟೇನು ಕೊಳೆತು ಹೋಗಿಲ್ಲ ಎನ್ನುತ್ತಾರೆ ಕಂದಾಯ ಇಲಾಖೆ ಅಧಿಕಾರಿಗಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.