ದೊಡ್ಡಬಳ್ಳಾಪುರ: ‘ಚಾಲನಾ ಪರವಾನಗಿ ಇಲ್ಲದೆ ವಾಹನ ಓಡಿಸಿದರೆ ಅದು ಅಕ್ರಮ. ವಾಹನ ಸವಾರರೂ ಎಚ್ಚರಿಕೆಯಿರಬೇಕು’ ಎಂದು ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ದ್ವಿಚಕ್ರ ವಾಹನ ಸವಾರರಿಗೆ ಚಾಲನಾ ಪರವಾನಗಿಯನ್ನು ಮಾಡಿಸಿಕೊಡುವ ಶಿಬಿರದಲ್ಲಿ ಅವರು ಮಾತನಾಡಿದರು.
ಕಾಯಂ ವಾಹನ ಚಾಲನಾ ಪರವಾನಗಿ ಪಡೆಯುವ ಮೊದಲು ಕಲಿಕಾ ಚಾಲನಾ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಈಗ ಈ ಪರವಾನಗಿಯನ್ನು ಆನ್ಲೈನ್ನಲ್ಲಿ ಸಲ್ಲಿಸಬೇಕಿದೆ. ದ್ವಿಚಕ್ರವಾಹನಗಳಿಗೆ ಇದರ ವೆಚ್ಚವನ್ನು ಈಗ ಮಾತ್ರ ಪೊಲೀಸ್ ಇಲಾಖೆಯಿಂದ ಭರಿಸಲಾಗುವುದು. ನಂತರದ ಪ್ರಕ್ರಿಯೆಗಳನ್ನು ದೇವನಹಳ್ಳಿಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮಾಡಬೇಕಾಗುತ್ತದೆ.
ಶಿಬಿರದಲ್ಲಿ ನಗರ ಠಾಣೆ ಎಸ್ಐ ಕೆ.ಎಸ್.ಜಗದೀಶ್, ಗ್ರಾಮಾಂತರ ಎಸ್ಐ ರಾಜು, ದೊಡ್ಡಬೆಳವಂಗಲ ಎಸ್ಐ ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು.
ನೂಕು ನುಗ್ಗಲು
ಪೊಲೀಸ್ ಇಲಾಖೆ ವತಿಯಿಂದ ದ್ವಿಚಕ್ರ ವಾಹನ ಸವಾರರಿಗೆ ಚಾಲನಾ ಪರವಾನಗಿಯನ್ನು ಮಾಡಿಸಿಕೊಡುವ ಶಿಬಿರ ಗ್ರಾಮಾಂತರ ಠಾಣೆ ಸಮೀಪದ ಜೆ.ಪಿ ಭವನಲ್ಲಿ ನಡೆಯಿತು.
ನಿರೀಕ್ಷೆಗೂ ಮೀರಿ ವಾಹನ ಸವಾರರು ಬಂದಿದ್ದರಿಂದ ಕೆಲಕಾಲ ನೂಕು ನುಗ್ಗಲು ಆಯಿತು. ಭವನದ ಸುತ್ತಮುತ್ತಲೂ ದ್ವಿಚಕ್ರವಾಹನ ಹಾಗೂ ಬಂದಿದ್ದ ಸಾರ್ವಜನಿಕರಿಂದ ಜನಜಂಗುಳಿಯೇ ಆಗಿತ್ತು. ಇದರಲ್ಲಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದುದು ಗಮನ ಸೆಳೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.