ADVERTISEMENT

ಪುರಸಭೆಯಿಂದ ಮರಗಳಿಗೆ ಕೊಡಲಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 6:24 IST
Last Updated 3 ಡಿಸೆಂಬರ್ 2017, 6:24 IST
ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಂಭಾಗದ ಮೈದಾನದಲ್ಲಿ ಬೆಳೆದಿದ್ದ ಮರಗಳನ್ನು ಕಿತ್ತು ಹಾಕಿರುವುದು
ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಂಭಾಗದ ಮೈದಾನದಲ್ಲಿ ಬೆಳೆದಿದ್ದ ಮರಗಳನ್ನು ಕಿತ್ತು ಹಾಕಿರುವುದು   

ವಿಜಯಪುರ: ಮರಗಿಡಗಳನ್ನು ಬೆಳೆಸಿ ಪರಿಸರವನ್ನು ಸಂರಕ್ಷಿಸಿ ಎಂದು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಪುರಸಭೆಯವರೇ ಮರಗಳನ್ನು ಕಡಿಯುವಂತ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ದ ನಗರ ಘಟಕದ ಅಧ್ಯಕ್ಷ ವಿ.ರಾ.ಶಿವಕುಮಾರ್ ಆರೋಪಿಸಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಂಭಾಗದಲ್ಲಿರುವ ಆಟದ ಮೈದಾನದಲ್ಲಿ ಬೆಳೆದು ನಿಂತಿದ್ದ ಎರಡು ಮರಗಳನ್ನು, ರಸ್ತೆ ಮಾಡುವ ನೆಪದಲ್ಲಿ ಬೆಳಗಿನ ಜಾವ ಕಿತ್ತುಹಾಕಿರುವ ಪುರಸಭೆಯ ಕ್ರಮಕ್ಕೆ ಸ್ಥಳೀಯ ಯುವಕರು ವಿರೋಧ ವ್ಯಕ್ತಪಡಿಸಿದಾಗ ಮರಗಳನ್ನು ಕೀಳುತ್ತಿದ್ದ ಜೆಸಿಬಿ ಯಂತ್ರದ ಸಮೇತ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದರು.

ಮರಗಳನ್ನು ಕಿತ್ತುಹಾಕಿರುವ ಕುರಿತು ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಕೆ.ಜಿ.ಅಮರನಾಥ ಅವರನ್ನು ದೂರವಾಣಿಯ ಮೂಲಕ ಸಂಪರ್ಕ ಮಾಡಿದಾಗ, ‘ಶಾಸಕರ ಸೂಚನೆಯಂತೆ ಮೈದಾನದಲ್ಲಿ ಸ್ವಚ್ಛತೆ ಮಾಡಲು ನಮ್ಮ ಸಿಬ್ಬಂದಿ ತೆರಳಿದ್ದರು. ಈ ವೇಳೆಸ್ಥಳೀಯ ಯುವಕರು ಅಡ್ಡಿ ಪಡಿಸಿದ್ದರಿಂದ ಸಿಬ್ಬಂದಿ ವಾಪಸ್‌ ಬಂದಿದ್ದಾರೆ. ಮರಗಳನ್ನು ಯಾರು ಕಿತ್ತು ಹಾಕಿದ್ದಾರೆಂದು ನಮಗೆ ಗೊತ್ತಿಲ್ಲವೆಂದು ಹೇಳುತ್ತಿದ್ದಾರೆ’ ಎಂದರು.

ADVERTISEMENT

ಅರಣ್ಯ ಇಲಾಖೆಯ ಅಧಿಕಾರಿಗಳ ಅಧಿಕೃತ ಅನುಮತಿಯಿಲ್ಲದೆ, ಮರಗಳನ್ನು ತೆರವುಗೊಳಿಸಿದ್ದಾರೆ. ಇಲ್ಲಿ ರಸ್ತೆ ನಿರ್ಮಾಣ ಮಾಡಲು ಅಧಿಕೃತ ನಕಾಶೆ ಇಲ್ಲ. ಆದರೂ ರಸ್ತೆ ನಿರ್ಮಾಣದ ಹೆಸರಿನಲ್ಲಿ ಮರಗಳ ಮಾರಣ ಹೋಮ ಮಾಡಲಾಗಿದೆ. ನಾವೇ ಮರಗಳನ್ನು ಪೋಷಣೆ ಮಾಡಿಕೊಂಡು ಬಂದಿದ್ದೇವೆ. ನಸುಕಿನ ವೇಳೆ ಈ ರೀತಿ ಮಾಡಿದ್ದಾರೆ’ ಎಂದು ಸ್ಥಳೀಯ ಯುವಕರು ದೂರಿದರು.

ಒಂದನೇ ವಾರ್ಡಿನಿಂದ ಒಂಬತ್ತನೇ ವಾರ್ಡಿಗೆ ಬರುವ ಜನರು ಇಲ್ಲಿಂದಲೇ ಓಡಾಡುತ್ತಾರೆ. ಆದ್ದರಿಂದ ಇಲ್ಲಿ ರಸ್ತೆಯನ್ನು ನಿರ್ಮಾಣ ಮಾಡಲು ಉದ್ದೇಶಿಸಿದ್ದಾರೆ. ರಸ್ತೆ ಮಾಡಿದರೆ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.