ವಿಜಯಪುರ: ಮುಂಗಾರು ಮಳೆ ಸುರಿಯದಿರುವ ಕಾರಣ ತರಕಾರಿಗಳ ಬೆಲೆಗಳು ಗಗನಕ್ಕೇರಿದೆ. ಮಳೆ ಕೊರತೆಯಿಂದ ರೈತರು ತರಕಾರಿಗಳು ಇಳುವರಿ ಬರುತ್ತಿಲ್ಲ. ಇದರಿಂದ ಮಾರುಕಟ್ಟೆಗೆ ಬರುವ ತರಕಾರಿ ಪ್ರಮಾಣ ಗಣನೀಯವಾಗಿ ಕುಸಿದಿದೆ. ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಆವಕವಾಗದೆ ಇರುವುದರಿಂದ ತರಕಾರಿಗಳ ಬೆಲೆಗಳು ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿವೆ.
‘ನಾವು ₹23,000 ಬಂಡವಾಳ ಹೂಡಿದ್ದೇವೆ. ಎರಡು ದಿನಗಳಲ್ಲಿ ₹1,800 ನಷ್ಟ ಅನುಭವಿಸಿದ್ದೇವೆ’ ಎಂದು ವ್ಯಾಪಾರಿ ಮಣಿಕಂಠ ಹೇಳುತ್ತಾರೆ. ಮುಂಗಾರು ಪ್ರಾರಂಭವಾಗುವ ಹೊತ್ತಿಗೆ ತರಕಾರಿ ಬೆಲೆ ತುಸು ಅಗ್ಗವಾಗುವುದು ವಾಡಿಕೆ. ಆದರೆ, ಈ ಬಾರಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಗಗನಕ್ಕೇರುತ್ತಿರುವ ಬೆಲೆಗಳು ಇಳಿಯುವ ಲಕ್ಷಣ ಗೋಚರಿಸುತ್ತಿಲ್ಲ.
‘ಬರದಿಂದ ಕೊಳವೆ ಬಾವಿಗಳು ಬತ್ತಿವೆ. ಯಾವುದೇ ನದಿ ನಾಲೆಗಳ ಆಸರೆಯಿಲ್ಲ. ಕೆರೆ ಕುಂಟೆಗಳಲ್ಲಿ ನೀರಿಲ್ಲ, ಹೀಗಾಗಿ ಬಹುತೇಕ ರೈತರಿಗೆ ತರಕಾರಿ ಬೆಳೆಯಲು ಸಾಧ್ಯವಾಗಿಲ್ಲ. ಇದರ ಪ್ರಭಾವ ಬೆಲೆ ಮೇಲೆ ತಟ್ಟಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಮಂಜುಳಮ್ಮ.
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಬಹುತೇಕ ತರಕಾರಿಗಳ ಬೆಲೆ ಸರಾಸರಿ ಶೇ 60ರಿಂದ ಶೇ 70ರಷ್ಟು ಹೆಚ್ಚಿದೆ. ಪ್ರತಿ ಕೆ.ಜಿಗೆ ₹40ರಿಂದ 50ರ ಆಸುಪಾಸಿನಲ್ಲಿದ್ದ ಬೆಲೆ ಈಗ ₹80ರಿಂದ 100ರ ಸಮೀಪಕ್ಕೆ ಬಂದಿವೆ. ಈ ಬಾರಿ ವಿಪರೀತ ಬೆಲೆ ಏರಿದೆ ಎನ್ನುತ್ತಾರೆ ತರಕಾರಿ ಖರೀದಿಗೆ ಬಂದಿದ್ದ ಗ್ರಾಹಕಿ ಶೈಲಜಾ.
ಆಲೂಗಡ್ಡೆ ಪ್ರತಿ ಕೆ.ಜಿ.ಗೆ ₹20 ಟೊಮೆಟೊ ₹80, ಈರುಳ್ಳಿ ₹30, ಬೀನ್ಸ್ ₹60, ಹುರುಳಿ ಕಾಯಿ ₹50, ಕ್ಯಾರೆಟ್ ₹40 ಇದೆ. ದೊಡ್ಡ ಮೆಣಸಿನಕಾಯಿ ₹35 ಬದನೆಕಾಯಿ ₹30 ಹೀರೆಕಾಯಿ ₹40 ಹಾಗಲಕಾಯಿ ₹ 45 ದರ ಇದೆ.
ಸೌತೆ ಕಾಯಿ, ಬೆಂಡೆಕಾಯಿ ₹50 ಹೂಕೋಸಿನ ಬೆಲೆ ಕೆ.ಜಿಗೆ ಸರಾಸರಿ ₹60 ಇದೆ. ಸೊಪ್ಪುಗಳ ಬೆಲೆಯೂ ದುಪ್ಪಟ್ಟಾಗಿದೆ. ಒಂದು ಕಟ್ಟಿಗೆ ₹60 ಪುದೀನಾ, ಮೆಂತೆ ₹10, ಮೂರು ನುಗ್ಗೆಕಾಯಿ ₹60 ಕ್ಕೆ ಮಾರಾಟವಾಗುತ್ತಿದೆ.
‘ಬೆಲೆ ಎಷ್ಟೇ ಹೆಚ್ಚಾದರೂ ಅಡುಗೆ ಮಾಡೋದು ಬಿಡೋಕಾಗತ್ತಾ, ಅನಿವಾರ್ಯ ಕೊಂಡು ತಿನ್ನಲೇಬೇಕಲ್ಲ’ ಎಂದು ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುತ್ತಿದ್ದ ಕೂಲಿ ಕಾರ್ಮಿಕ ಮಹಿಳೆ ಶಾಂತಮ್ಮ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.