ADVERTISEMENT

ಶೈಕ್ಷಣಿಕ ಅರ್ಹತೆ, ಸಾಮಾಜಿಕ ಹೊಣೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 8:08 IST
Last Updated 4 ಮಾರ್ಚ್ 2017, 8:08 IST

ದೊಡ್ಡಬಳ್ಳಾಪುರ: ಶೈಕ್ಷಣಿಕ ಅರ್ಹತೆಯು ಯುವಜನರನ್ನು ಸಾಮಾಜಿಕ ಜವಾಬ್ದಾರಿಯುಳ್ಳವರನ್ನಾಗಿ ರೂಪಿಸಬೇಕು ಎಂದು ಯುವ ಮುಖಂಡ ಕೆ.ಎಸ್.ಗಿರೀಶ್ ಹೇಳಿದರು.

ಕನಸವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸರಸ್ವತಿ ಪೂಜೆ ಹಾಗೂ ಪರೀಕ್ಷಾ ಪ್ರವೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ದೊಡ್ಡಬಳ್ಳಾಪುರಕ್ಕೆ ಪರೀಕ್ಷೆ ಬರೆಯಲು ತೆರಳುವ ಕನಸವಾಡಿ ವಿದ್ಯಾರ್ಥಿಗಳಿಗೆ ಉಚಿತ ವಾಹನ ವ್ಯವಸ್ಥೆಯೊಂದಿಗೆ ಉಪಹಾರ ವ್ಯವಸ್ಥೆಯನ್ನೂ ಮಾಡುವುದಾಗಿ ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಜಿ.ರಾಮಚಂದ್ರ, ಗಿರೀಶ್ ಅವರಂತಹ ದಾನಿಗಳು ಇರುವುದರಿಂದ ಗ್ರಾಮೀಣ ಭಾಗದ ಬಡಜನರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನಡೆಸಲು ಸಾಧ್ಯವಾಗುತ್ತದೆ. ಇಂತಹ ಉದಾರ ಮನಸ್ಥಿತಿಯನ್ನು ಮುಂದಿನ ಪೀಳಿಗೆ ರೂಢಿಸಿಕೊಂಡರೆ ಗ್ರಾಮೀಣ ಭಾಗದ ಶೈಕ್ಷಣಿಕ ಮಟ್ಟದಲ್ಲಿ ಉನ್ನತಿ ಸಾಧಿಸಬಹುದು ಎಂದರು.

ಉಪನ್ಯಾಸಕರಾದ ಟಿ.ವಿ.ರಾಧ ಹಾಗೂ ಕೆ.ಪಿ.ಮಂಗಳಾ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಪರೀಕ್ಷೆಯ ನಿಯಮಗಳನ್ನು ತಿಳಿಸುವುದರೊಂದಿಗೆ ಹೆಚ್ಚು ಅಂಕ ಗಳಿಸುವ ಕುರಿತು ಅಗತ್ಯ ಸಲಹೆಗಳನ್ನು ನೀಡಿದರು. ಉಪನ್ಯಾಸಕರಾದ ಎಂ.ಎಲ್. ಕಂಬಣ್ಣ, ಉಪೇಂದ್ರ, ಶ್ರೀನಿವಾಸ್, ರಾಜಶ್ರೀ, ರಾಘವೇಂದ್ರ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.