ADVERTISEMENT

ಐದು ಗ್ರಾಮಗಳಿಗೆ ₹5 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 6:22 IST
Last Updated 3 ಫೆಬ್ರುವರಿ 2018, 6:22 IST

ದೇವನಹಳ್ಳಿ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ವಿವಿಧ ಮೂಲ ಸೌಲಭ್ಯ ಕಲ್ಪಿಸಲು ₹5 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರವಾಗಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವು ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಗ್ರಾಮ ವಿಕಾಸ ಯೋಜನೆಯಡಿ ಐದು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿ ಪಡಿಸಲಾಗಿದೆ. ಪ್ರಸ್ತುತ ನಾಡ ಪ್ರಭು ಕೆಂಪೇಗೌಡ ವಂಶಸ್ಥರಾದ ನಾಡಪ್ರಭು ರಣಭೈರೇಗೌಡರ ಕರ್ಮಭೂಮಿ ಆವತಿ ಗ್ರಾಮ, ವಿಶ್ವನಾಥಪುರ, ಬೂದಿಗೆರೆ, ಸಿಂಗ್ರಹಳ್ಳಿ, ತೂಬುಗೆರೆ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

ಗ್ರಾಮಗಳಲ್ಲಿ ಚರಂಡಿ ನಿರ್ಮಾಣ, ತಾಜ್ಯ ಸಂಸ್ಕರಣಾ ಘಟಕ, ಗ್ರಂಥಾಲಯ, ರಸ್ತೆ ದುರಸ್ತಿ, ಸಮುದಾಯ ಭವನ, ದೇವಾಲಯಗಳ ಜೀರ್ಣೋದ್ಧಾರ, ಕುಡಿಯುವ ಶುದ್ಧ ನೀರಿನ ಘಟಕ, ವಿವಿಧ ರೀತಿಯ ಸೌಲಭ್ಯಗಳನ್ನು ಗ್ರಾಮ ವಿಕಾಸ ಯೋಜನೆಯ ಮಾನದಂಡ ಅನ್ವಯ ನಡೆಸಲಾಗುತ್ತದೆ ಎಂದರು.

ADVERTISEMENT

ದೇವನಹಳ್ಳಿ ಪುರಸಭೆ ಮತ್ತು ವಿಜಯಪುರ ಪುರಸಭೆ ವ್ಯಾಪ್ತಿಯಲ್ಲಿ ಯುವಕರಿಗೆ ವ್ಯಾಯಾಮ ಶಾಲೆ (ಜಿಮ್) ಆರಂಭಿಸಲಾಗುವುದು. ಅಟಲ್ ಬಿಹಾರಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಸತಿ ಶಾಲೆ, ಜಿಲ್ಲಾಡಳಿತ ಕಚೇರಿ ಸಂಕೀರ್ಣ, ಫೆಬ್ರುವರಿಯಲ್ಲಿ ನಡೆಯಲಿರುವ ಬಜೆಟ್ ಅಧಿವೇಶನದ ನಂತರ ಉದ್ಘಾಟಿಸುವಂತೆ ಜಿಲ್ಲಾ ಉಸ್ತುವಾರಿ ಮತ್ತು ಕೃಷಿ ಸಚಿವರನ್ನು ಮನವಿ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವ ದಿನಾಂಕ ಪಡೆಯಲು ಪ್ರಯತ್ನಿಸಲಾಗುತ್ತೆದೆ ಎಂದರು.

ಪುರಸಭೆ ಅಧ್ಯಕ್ಷ ಎಂ.ಮೂರ್ತಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಗೋಪಾಲ್, ಸದಸ್ಯ ಜಿ.ಎ.ರವೀಂದ್ರ, ವಿ.ಗೋಪಾಲ ಕೃಷ್ಣ, ನರಸಿಂಹಮೂರ್ತಿ, ಜೆಡಿಎಸ್ ಅಲ್ಪಸಂಖ್ಯಾತರ ಘಟಕ ತಾಲ್ಲೂಕು ಅಧ್ಯಕ್ಷ ಆಸೀಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.