ADVERTISEMENT

‘ಎಲ್ಲರಿಗೂ ಆಹ್ಲಾದ ನೀಡುವ ಸಂಗೀತ’

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 8:44 IST
Last Updated 20 ಫೆಬ್ರುವರಿ 2018, 8:44 IST

ವಿಜಯಪುರ: ಸಂಗೀತ ಶುದ್ಧ ಕಲೆಯಾಗಿದ್ದು, ಸರ್ವರಿಗೂ ಆಹ್ಲಾದ ನೀಡುತ್ತದೆ. ಸಂಗೀತವನ್ನು ಆಲಿಸುವ ಮೂಲಕ ಮನಸ್ಸಿನ ನೆಮ್ಮದಿ ಕಂಡುಕೊಳ್ಳಲು ಸಾಧ್ಯ. ಒತ್ತಡವನ್ನು ನಿವಾರಿಸಿ, ಶಾಂತಿ ನೀಡುವ ಶಕ್ತಿ ಸಂಗೀತಕ್ಕೆ ಇದೆ ಎಂದು ಪುರಸಭಾ ಸದಸ್ಯ ಎಂ.ಸತೀಶ್ ಕುಮಾರ್ ಹೇಳಿದರು.

ಇಲ್ಲಿನ ಗಾಂಧಿಚೌಕದಲ್ಲಿ ವಿಜಯಪುರ ಜೇಸಿಐ ಮತ್ತು ಶ್ರೀವತ್ಸ ಮ್ಯೂಸಿಕಲ್ ವರ್ಲ್ಡ್  ವತಿಯಿಂದ ಆಯೋಜಿಸಿದ್ದ ಗಾನಸುಧಾ–2018 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಗೀತಕ್ಕೆ ಜಾತಿ, ಮತ, ಪಂಥಗಳ ಮೀರಿದ ಸಂಚಲನ ಶಕ್ತಿಯಿದೆ. ಇದು ವಿಶ್ವಭಾಷೆಯಾಗಿ ಬೆಳೆದಿದೆ. ಭಾವನೆಗಳನ್ನು ಜೋಡಿಸಿ ಮನಸ್ಸುಗಳ ದುಗುಡ ಕಡಿಮೆ ಮಾಡುವ ಶಕ್ತಿ ಸಂಗೀತಕ್ಕಿದೆ ಎಂದರು ಅಭಿಪ್ರಾಯಪಟ್ಟರು.

ADVERTISEMENT

ಜೇಸಿಐ ಸಂಸ್ಥೆಯ ವಲಯ–14ರ ಉಪಾಧ್ಯಕ್ಷ ಸಿ.ಜಿ.ದರ್ಶನ್ ಮಾತನಾಡಿ, ಸಂಗೀತದ ನಿಜವಾದ ಬೇರುಗಳು ಶಾಸ್ತ್ರೀಯ ಸಂಗೀತದಲ್ಲಿದೆ. ಟ್ರ್ಯಾಕ್‌ ಸಂಗೀತದ ಹಾಡುಗಾರಿಕೆ ಬರುವ ಪೂರ್ವದಲ್ಲೇ ಹಾರ್ಮೋನಿಯಂ ಮತ್ತು ತಬಲಾದ ಸಾಥ್‌ ಮೂಲಕ ಹಾಡುಗಳ ಸವಿ ಅನುಭವಿಸಲಾಗುತ್ತಿತ್ತು ಎಂದರು.

ಶ್ರೀ‌ವತ್ಸ ಮೂಸಿಕಲ್ ವರ್ಲ್ಡ್ಸ್ ನ ಸಂಸ್ಥಾಪಕ ಮೋಹನ್ ಶ್ರೀವತ್ಸ ಮಾತನಾಡಿ, ಉತ್ತಮ ಕಲಾವಿದರಾಗಲು ಶಾರೀರ, ಕಲಿಯುವ ಉತ್ಸಾಹ, ಮನೆಯವರ ಪ್ರೋತ್ಸಾಹ ಹಾಗೂ ಒಳ್ಳೆಯ ಗುರುಗಳು ಸಿಗಬೇಕು ಎಂದರು. ಉಸಿರನ್ನು ಎಷ್ಟು ದೀರ್ಘವಾಗಿಸುತ್ತೇವೋ ಅಷ್ಟು ಆಯಸ್ಸು ವೃದ್ಧಿಸುತ್ತದೆ. ಸಂಗೀತವೆಂಬುದು ಅತ್ಯುನ್ನತ ಮಹಾ ಧ್ಯಾನದಂತೆ ಎಂದರು.

ಉಸಿರನ್ನು ಕಾಪಾಡುವ ಶಕ್ತಿ ಸಂಗೀತದಲ್ಲಿ ಅಡಗಿದೆ. ಸಂಗೀತಗಾರರಿಗೆ ಆಯುಷ್ಯ ಮತ್ತು ಆರೋಗ್ಯ ಚೆನ್ನಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು. ಸಂಗೀತ ಮತ್ತು ನೃತ್ಯದ ಜೋಡಿ ಚೆಂದ, ನೃತ್ಯವಿರದೆ ಸಂಗೀತವಿರಬಹುದು, ಸಂಗೀತವಿಲ್ಲದೆ ನೃತ್ಯವಿರಲಾರದು ಎಂದು ತಿಳಿಸಿದರು. ಗಾನಸುಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಬಹುಮಾನ ವಿತರಣೆ ಮಾಡಲಾಯಿತು. ಪುರಸಭಾ ಸದಸ್ಯ ವಿ.ಎಂ.ನಾಗರಾಜ್, ಜೇಸಿ ಸಂಸ್ಥೆಯ ಜನಾರ್ಧನ್, ಮೂರ್ತಿ(ಜಾನಿ), ಆಶಾ ಮಂಜುನಾಥ್, ನವೀನ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.