ADVERTISEMENT

ಆಸ್ಪತ್ರೆ ಆವ್ಯವಸ್ಥೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 5:10 IST
Last Updated 11 ನವೆಂಬರ್ 2017, 5:10 IST
ಘಟಪ್ರಭಾ ಸಮೀಪದ ಪಾಮಲದಿನ್ನಿಯಲ್ಲಿ ಪಶು ಆಸ್ಪತ್ರೆ ವ್ಯವಸ್ಥೆಯನ್ನು ಖಂಡಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಘಟಪ್ರಭಾ ಸಮೀಪದ ಪಾಮಲದಿನ್ನಿಯಲ್ಲಿ ಪಶು ಆಸ್ಪತ್ರೆ ವ್ಯವಸ್ಥೆಯನ್ನು ಖಂಡಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಘಟಪ್ರಭಾ: ಪಾಮಲದಿನ್ನಿ ಗ್ರಾಮದ ಪಶು ಆಸ್ಪತ್ರೆಯಲ್ಲಿಯ ಅವ್ಯವಸ್ಥೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಪಶು ಸಂಗೋಪನೆ ಆಸ್ಪತ್ರೆ ಕಚೇರಿ ಎದುರು ಸೇರಿದ ಕರವೇ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ನಂತರ ಸಹಾಯಕ ನಿರ್ದೇಶಕ ಮೋಹನ ಕಮತ ಅವರ ಮುಖಾಂತರ ಉಪ ನಿರ್ದೇಶಕರಿಗೆ ಮನವಿ ಅರ್ಪಿಸಿದರು.

ಈ ಪಶು ಆಸ್ಪತ್ರೆಯು ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಇಲ್ಲ. ಈ ಕುರಿತು ಹಲವು ಬಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮೂಕ ಪ್ರಾಣಿಗಳು ಸರಿಯಾದ ವ್ಯವಸ್ಥೆ ಮತ್ತು ಔಷಧೋಪಚಾರ ಚಿಕಿತ್ಸೆ ಸಿಗದೇ ಪರದಾಡುವಂತಾಗಿದೆ ಎಂದು ಕಾರ್ಯಕರ್ತರು ದೂರಿದರು.

ಹಲವು ದಿನಗಳಿಂದ ಇಲ್ಲಿಯ ವೈದ್ಯರು ಆಸ್ಪತ್ರೆಗೆ ನಿಯೋಜನೆಗೊಂಡಿರುವುದೇ ಪ್ರಮುಖ ಕಾರಣ. ಇದರಿಂದ ಸಾಕಷ್ಟು ಕೆಲಸಗಳು ಮತ್ತು ಕಡತಗಳು ಬಾಕಿ ಉಳಿದಿವೆ. ರೈತರಿಗಾಗಿ ವಿತರಣೆ ಮಾಡುವ ಬೀಜಗಳು, ರಸಗೊಬ್ಬರಗಳು ಸಹ ಸರಿಯಾಗಿ ವಿತರಣೆಯಾಗುತ್ತಿಲ್ಲ. ಇದರಿಂದ ಪಶು ಆಸ್ಪತ್ರೆಯನ್ನು ಅವಲಂಬಿಸಿರುವ ರೈತರು ಸಹ ಸರಿಯಾದ ಸಮಯಕ್ಕೆ ರಸಗೊಬ್ಬರ ಬೀಜಗಳನ್ನು ಪಡೆಯದೇ ಕಂಗಾಲಾಗುತ್ತಿದ್ದಾರೆ ಎಂದರು.

ADVERTISEMENT

ರಾಜ್ಯದಾದ್ಯಂತ ಚಾಲ್ತಿಯಲ್ಲಿರುವ ದನ– ಕರುಗಳಿಗೆ ಲಸಿಕಾ ಕಾರ್ಯಕ್ರಮವು ಸಹ ಈ ಪಶು ಆಸ್ಪತ್ರೆಯಲ್ಲಿ ಸರಿಯಾಗಿ ಅನುಷ್ಠಾನವಾಗಿಲ್ಲ. ಸಿಬ್ಬಂದಿ ಸಹ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡದೇ ಸತಾಯಿಸುತ್ತಿದ್ದಾರೆ. ಕಾರಣ ಆದಷ್ಟು ಬೇಗ ವೈದ್ಯರ ನಿಯೋಜನೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಸಮಸ್ಯೆಗೆ ಸ್ಪಂದಿಸದೇ ಹೋದಲ್ಲಿ ಸಹಾಯಕ ನಿರ್ದೇಶಕರ ಮನೆ ಎದುರು ಧರಣಿ ಸತ್ಯಾಗ್ರಹ ಕೈಗೊಂಡು ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಕಾರ್ಯಕರ್ತರು ಎಚ್ಚರಿಸಿದರು.

ತಾಲ್ಲೂಕು ಅಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೃಷ್ಣಾ ಖಾನಪ್ಪನವರ, ದೀಪಕ ಹಂಜಿ, ಬಸು ಗಾಡಿವಡ್ಡರ, ಸಂಜು ಗಾಡಿವಡ್ಡರ, ವಸಂತ ಹಂಜಿ, ಶೆಟ್ಟೆಪ್ಪ ಗಾಡಿವಡ್ಡರ, ಮಲ್ಲು ಸಂಪಗಾರ, ರಮೇಶ ಕಮತಿ, ರವಿ ನಾವಿ, ಮಲ್ಲಪ್ಪ ತಲೆಪ್ಪಗೋಳ, ರಮೇಶ ಕೆ., ನಿಯಾಜ್ ಪಟೇಲ್, ಅಪ್ಪಯ್ಯ ತಿಗಡಿ, ವಿಠ್ಠಲ ಹೂಲಿಕಟ್ಟಿ, ವಿಠ್ಠಲ ಸಣ್ಣಕ್ಕಿ, ಸುರೇಶ ಹುಣಶ್ಯಾಳ, ಆನಂದ ಕದಮ್, ಮಂಜು ಗಾಡಿವಡ್ಡರ, ಮಲ್ಲಪ್ಪ ಕೌಜಲಗಿ, ಮಾರುತಿ ಹಂಜಿ, ಬಸಪ್ಪ ಕುರಣಿ, ದುಂಡಪ್ಪ ಭಾವಿಕಟ್ಟಿ, ಸಿದ್ದಪ್ಪ ಹಣಬರಟ್ಟಿ, ವಿಠ್ಠಲ ಹಂಜಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.