ಖಾನಾಪುರ: ತಾಲ್ಲೂಕಿನ ಲೋಂಡಾ ವಲಯದ ಕಿರಾವಳೆ ಅರಣ್ಯ ಪ್ರದೇಶದಲ್ಲಿ 7ರಿಂದ 8 ವರ್ಷ ವಯಸ್ಸಿನ ಗಂಡು ಚಿರತೆಯ ಮೃತದೇಹ ಭಾನುವಾರ ಪತ್ತೆಯಾಗಿದೆ.
ಆರೇಳು ದಿನಗಳ ಹಿಂದೆಯೇ ಚಿರತೆಯು ಡೊಂಗರಗಾಂವ ಮತ್ತು ಕಿರಾವಳೆ ಮಧ್ಯದ ದಟ್ಟ ಅರಣ್ಯದಲ್ಲಿ ಅನಾರೋಗ್ಯದಿಂದ ಮೃತಪಟ್ಟಿರಬಹುದು ಎಂದು ಅರಣ್ಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಬೆಳಗಾವಿ ಡಿ.ಎಫ್.ಒ ಬಸವರಾಜ ಪಾಟೀಲ, ಖಾನಾಪುರ ಎ.ಸಿ.ಎಫ್ ಸಿ ಬಿ ಪಾಟೀಲ, ಲೋಂಡಾ ಆರ್.ಎಫ್.ಒ ಬಸವರಾಜ ವಾಳದ ಮತ್ತು ಸಿಬ್ಬಂದಿ ಭೇಟಿ ನೀಡಿ ಮೃತ ಚಿರತೆಯ ದೇಹದ ಪಂಚನಾಮೆ ಕೈಗೊಂಡಿದ್ದಾರೆ. ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗುರುರಾಜ ಮನಗೂಳಿ ಹಾಗೂ ಗುಂಜಿ ಪಶು ಚಿಕಿತ್ಸಾಲಯದ ಸಿಬ್ಬಂದಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಕಾಲು ಹೊತ್ತೊಯ್ದ ಕಳ್ಳರು..!
ಕಿರಾವಳೆ ಅರಣ್ಯದಲ್ಲಿ ಜಾನುವಾರು ಮೇಯಿಸಲು ಹೋಗಿದ್ದ ದನಗಾಹಿಗಳಿಗೆ ಪ್ರಾಣಿಯೊಂದರ ದೇಹದ ವಾಸನೆ ಬಂದಿದೆ. ಅದರ ಸುಳಿವನ್ನಾಧರಿಸಿ ಭಾನುವಾರ ಶೋಧಕಾರ್ಯ ನಡೆಸಿದಾಗ ಚಿರತೆಯ ಮೃತದೇಹ ಸಿಕ್ಕಿದೆ. ಆದರೆ ಅದರ ಉಗುರು, ಕಾಲುಗಳೇ ಇರಲಿಲ್ಲ.ಈ ಮಾಹಿತಿಯನ್ನು ಅವರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಲೋಂಡಾ ವಲಯದ ಆರ್.ಎಫ್.ಒ ಬಸವರಾಜ ವಾಳದ ಹಾಗೂ ಸಿಬ್ಬಂದಿ ಬೆಳಗಾವಿ ವಿಭಾಗದ ಉಪ ಸಂರಕ್ಷಣಾಧಿಕಾರಿ ಬಸವರಾಜ ಪಾಟೀಲ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ಚಿರತೆ ಸತ್ತಿದ್ದನ್ನು ಗಮನಿಸಿದ ಬೇಟೆಗಾರರು ಚಿರತೆಯ ಉಗುರುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಚಿರತೆಯ ದೇಹದಿಂದ ಕಾಲುಗಳನ್ನು ಬೇರ್ಪಡಿಸಿ ಕದ್ದೊಯ್ದಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಲೋಂಡಾ ವಲಯ ಅಧಿಕಾರಿ ದೂರು ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.