ಗೋಕಾಕ: ಮುಂಬರುವ ಚುನಾವಣೆ ಯಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಃಸಿದ್ದ ಎಂದು ಸಣ್ಣ ಕೈಗಾರಿಕೆ ಸಚಿವ ರಮೇಶ ಜಾರಕಿಹೊಳಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬೆಣಚಿನಮರಡಿ (ಕೊ) ಗ್ರಾಮದ ಬಿರೇಶ್ವರ, ಮಾರುತೇಶ್ವರ, ಬಸವೇಶ್ವರ, ಲಕ್ಷ್ಮೀದೇವಿ, ಪಾಂಡು ರಂಗ, ದುರ್ಗಾದೇವಿ, ವಾಲ್ಮೀಕಿ, ಸಂಗೊಳ್ಳಿ ರಾಯಣ್ಣ ಕಾರ್ತೀಕೋತ್ಸವ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಪ್ರಧಾನಿಯಾಗಿ ರಾಹುಲ ಗಾಂಧಿ ಅವರ ಆಯ್ಕೆ ಖಚಿತ. ಬರೀ ಸುಳ್ಳು ಆಶ್ವಾಸನೆಗಳನ್ನು ನೀಡುವ ಮೂಲಕ ದೇಶದ ಚುಕ್ಕಾಣಿ ಹಿಡಿದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಶಾಶ್ವತವಲ್ಲ ಎಂದು ಅವರು ಭವಿಷ್ಯ ನುಡಿದರು.
ಜಾತಿ ರಾಜಕಾರಣದಿಂದ ಸಮಾಜದ ಸ್ವಾಸ್ಥ್ಯ ಹಾಳು ಮಾಡಿ, ಈಗ ಮುಂದಿನ ಮುಖ್ಯಮಂತ್ರಿ ಎಂದು ಹಗಲು ಗನಸು ಕಾಣುತ್ತಿರುವ ಯಡಿ ಯೂರಪ್ಪ ಅವರು ಗೋಕಾಕ ಹಾಗೂ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಸೇರಿದ ಜನತೆ ನೋಡಿ ಕಂಗಾಲಾಗಿದ್ದಾರೆ. ಇದೀಗ ಬಿಜೆಪಿ ಪಾಳೆಯದಲ್ಲಿ ನಡುಕ ಪಾರಂಭವಾಗಿದೆ. ಬೆಳಗಾವಿ ಜಿಲ್ಲೆ ಕಾಂಗ್ರೆಸ್ನ ಭದ್ರಕೋಟೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಬೆನಚಿನಮರಡಿ ಗ್ರಾಮದಲ್ಲಿ ಎಲ್ಲ ದೇವತೆಗಳ ಕಾರ್ತಿಕೋತ್ಸವ ಹಾಗೂ ಸಾಮೂಹಿಕ ವಿವಾಹವನ್ನು ಒಂದೇ ದಿನ ಜಾತ್ಯಾತೀತವಾಗಿ ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸಾನ್ನಿಧ್ಯವನ್ನು ಕವಲಗುಡ್ಡದ ಸಿದ್ದಯೋಗಿ ಅಮರೇಶ್ವರ ಮಹಾ ರಾಜರು ವಹಿಸಿದ್ದರು. ತವಗದ ಸಿದ್ದಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಲಕ್ಕಪ್ಪ ಮಾಳಗಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯ್ತಿ ಸದಸ್ಯರಾದ ಟಿ.ಆರ್.ಕಾಗಲ. ಮಡ್ಡೆಪ್ಪ ತೋಳಿನವರ, ಮುತ್ತೆಪ್ಪ ಬೀರನಗಡ್ಡಿ, ವಿಠ್ಠಲ ಗುಂಡಿ, ಸಿದ್ದಪ್ಪ ಪೂಜೇರಿ, ಸಿದ್ದಪ್ಪ ಗುಂಡಿ, ಕೆಂಪಣ್ಣ ಬಂಡೆಪ್ಪಗೋಳ, ಮಲ್ಲಪ್ಪ ಗುಡಸಿ, ಶಿವಾನಂದ ಗುಂಡಿ, ರಾಮಕೃಷ್ಣ ತುರಾಯಿ, ಸುನೀಲ ವಡ್ಡರ, ಸಿದ್ದಪ್ಪ ರಂಗನ್ನವರ, ಲಖನ ಖಿಲಾರಿ, ರಾಮೋಜಿ ಮಾಳಗಿ, ಉದ್ದಪ್ಪ ಖಿಲಾರಿ, ಮಾರುತಿ ಕೆಂಪನ್ನವರ, ಶ್ರೀಕಾಂತ ದಾಸಂತರ, ಯಲ್ಲಪ್ಪ ಕುರಿ, ಲಕ್ಷ್ಮಣ ಪಾಟೀಲ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.