ADVERTISEMENT

ಗುರುವಂದನೆ ನೀಡಿ ಪುಳಕಿತರಾದ ಶಿಷ್ಯವೃಂದ

ವೊಲ್ಕಾರ್ಟ್‌ ಅಕಾಡೆಮಿಯಲ್ಲಿ ಹೃದಯಸ್ಪರ್ಶಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 5:46 IST
Last Updated 31 ಜನವರಿ 2017, 5:46 IST
ಗುರುವಂದನೆ ನೀಡಿ ಪುಳಕಿತರಾದ ಶಿಷ್ಯವೃಂದ
ಗುರುವಂದನೆ ನೀಡಿ ಪುಳಕಿತರಾದ ಶಿಷ್ಯವೃಂದ   

ಘಟಪ್ರಭಾ: ತಮಗೆ ಕಲಿಸಿದ ಗುರುಗಳಿಗಾಗಿ ಸಮೀಪದ ಗೋಕಾಕ ಫಾಲ್ಸ್ ಪ್ರದೇಶದಲ್ಲಿರುವ ದಿ ವೋಲ್ಕಾರ್ಟ್‌ ಅಕಾಡೆಮಿ ಶಾಲೆಯ 1992 ಸಾಲಿನ ವಿದ್ಯಾರ್ಥಿಗಳಿಂದ ‘ಗುರು ವಂದನಾ’ ಕಾರ್ಯಕ್ರಮ ಭಾನುವಾರ ಗೋಕಾಕದ ಜ್ಞಾನಮಂದಿರದ ಸಭಾ ಭವನದಲ್ಲಿ ಜರುಗಿತು.

ಮುಖ್ಯೋಪಾಧ್ಯಾಯ ಮಾರುತಿ ಎಲ್. ಬಗನಾಳ ಮಾತನಾಡಿ,  ಎರಡು ದಶಕಗಳ ಹಿಂದೆ ಹಾಗೂ ಇಂದಿನ ವಿದ್ಯಾರ್ಥಿಗಳ ಭಾವಗಳಲ್ಲಿ ಸಾಕಷ್ಟು ಬದಲಾವಣೆಗಳಿವೆ. ಅಂದು ಭಯ–ಭಕ್ತಿ, ಶಿಸ್ತು ಇತ್ತು. ಇಂದು ನಾವು ಎಷ್ಟು ಸರಿಯಾಗಿ ಪಾಠ ಮಾಡಿದರೂ ಕೂಡ ಕೆಲವರನ್ನು ಹೊರತು ಪಡಿಸಿ ಅಧಿಕ ಸಂಖ್ಯೆಯ ಮಕ್ಕಳಲ್ಲಿ ಇಚ್ಛಾಶಕ್ತಿಯ ಅಭಾವ ಕಂಡು ಬರುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ಪಾಲಕರು ಎಲ್ಲದಕ್ಕಿಂತ ಮಕ್ಕಳೆ ನಮ್ಮ ದೊಡ್ಡ ಆಸ್ತಿ ಎಂಬ ಧೋರಣೆ ತಾಳಿ ಅವರಿಗೆ  ಉತ್ತಮ ಸಂಸ್ಕಾರ ನೀಡಲು ಮುಂದಾಗಬೇಕು ಎಂದು ಸಲಹೆ ನೀಡದರು.
ಶಿಕ್ಷಕನಿಗೆ ನೂರಾರು ಎಂಜಿನಿಯರ್‌, ವೈದ್ಯರನ್ನಾಗಿ ಮಾಡುವ ಕಲೆ ಹೊಂದಿರುತ್ತಾನೆ. ಆದರೆ, ಅದೇ ಎಂಜಿನಿಯರ್ ಆಗಲಿ ವೈದ್ಯನಾಗಲಿ ಒಬ್ಬ ಶಿಕ್ಷಕನನ್ನು ರೂಪಿಸಲು ಅಸಾಧ್ಯ. ಮೇಣ ಬತ್ತಿಯಂತೆ ತನ್ನ ಜ್ಞಾನವನ್ನು ಧಾರೆ ಎರೆಯುತ್ತಾ ಇಡೀ ಜಗಕೆ ಬೆಳಕು ನೀಡಿ ಕಣ್ಮರೆಯಾಗುವನೆ ನಿಜವಾದ ಶಿಕ್ಷಕ ಎಂದು ಶ್ರೀ ಶಿವಾನಂದ ಸ್ವಾಮಿಗಳ ಹೇಳಿದ ನುಡಿಮುತ್ತುಗಳೆಂದು ಹೇಳಿದ, ಅವರು, ಕೆಲ ನಗೆಹನಿಗಳನ್ನು ಹೇಳಿದರ ಲ್ಲದೆ, ಪೋರಿ ನಿನ್ನ ನೋಡಲಾಕ ಯಾರೋ ಏನೋ ಬರ್ತಾರಂತ... ಎಂಬ ಜಾನಪದ ಗೀತೆ ಹಾಡಿ ಸಭಿಕರನ್ನು ನಗೆ ಗಡಲಲ್ಲಿ ತೇಲಾಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಮುಖ್ಯೋಪಾಧ್ಯಾಯ ಆರ್.ಎಲ್. ಪಾಟೀಲ, ತಮ್ಮ  ಅನಾರೋಗ್ಯವನ್ನು ಗಮನಿಸದೆ ಶಿಕ್ಷಕ ವೃತ್ತಿಯ ಪಾವಿತ್ರ್ಯದ ಬಗ್ಗೆ ಪಾವಟೆಯವರು ಜಿಲ್ಲಾಧಿಕಾರಿ ಯಾಗಿದ್ದಾಗ ದ.ರಾ. ಬೇಂದ್ರೆಗೆ ನೀಡಿದ ಗೌರವದ ಉದಾಹರಣೆ ನೀಡಿ, ಇದು ವರೆಗೆ ನಮಗೆ ಇಂಥ ಗೌರವ ನೀಡಿಲ್ಲ ಇದಕ್ಕೆ ನಾವು ಆಭಾರಿ ಎಂದರು.
ಹದಿನೈದಕ್ಕೂ ಹೆಚ್ಚು ಗುರುವಂದನೆ ಸ್ವೀಕರಿಸಿದ ಗುರುಗಳು ಅಂದು–ಇಂದಿನ ಶಿಕ್ಷಣ –ಸಂಸ್ಕಾರದ ಬಗ್ಗೆ ಮಾರ್ಮಿಕ ವಾಗಿ ವಿವರಿಸಿ ಪ್ರಸ್ತುತ ಸಂದರ್ಭದಲ್ಲಿ ಮುಂದಿನ ಪೀಳಿಗೆಗೆ ಯಾವ ರೀತಿ ಶಿಕ್ಷಣ ನೀಡಬೇಕೆಂಬ ಸಲಹೆ ನೀಡಿದರು. ಶಿಕ್ಷಕಿ ಪರಿಮಳಾ ಬಿ. ದೇಶಪಾಂಡೆ ಭಾವಗೀತೆ ಹಾಡಿದರು.

ಇದೇ ಸಂದರ್ಭದಲ್ಲಿ ಸಿದ್ಧು ಕೋಳಿ ಅವರ ರಚಿಸಿದ ಶಿಕ್ಷಕರ, ಒಂದು ‘ಸವಿನೆನಪು’ ಎಂಬ ಸಾಕ್ಷ್ಯಚಿತ್ರವೂ ಬಿತ್ತರಗೊಂಡಿತು. ಶಿಕ್ಷಕರಿಂದ ಸ್ಮರಣ ಸಂಚಿಕೆಯೊಂದಿಗೆ ವಿದ್ಯಾರ್ಥಿಗಳೆಲ್ಲ ಆಶೀರ್ವಾದ ಪಡೆದರು. ನಂತರ ಮಕ್ಕಳಿಂದ ಭರತನಾಟ್ಯ, ಸೋಲೋ –ಗುಂಪು ನೃತ್ಯಗಳು, ಸಾರಂಗ ವಾದನ, ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಬೆಳಗಾವಿಯ ಆರ್.ಎಲ್.ಎಸ್. ಮಹಾವಿದ್ಯಾಲಯದ ಪ್ರಾಧ್ಯಾಪಕ ವಿಶ್ವನಾಥ ಗಾಣಿಗೇರ ಸ್ವಾಗತಿಸಿದರು. ಗೋಕಾಕ ಫಾಲ್ಸ್‌ನ ದಿ ಫೋರ್ಬ್ಸ್‌ ಅಕಾಡೆಮಿ ಶಾಲೆಯ ಹಿರಿಯ ಶಿಕ್ಷಕಿ ಸೀತಾ ಸಿ. ದೊಡ್ಡಮನಿ ನಿರೂಪಿಸಿದರು. ಹುಬ್ಬಳ್ಳಿ ಐ.ಟಿ.ಐ. ಕಾಲೇಜಿನ ಪ್ರಾಧ್ಯಾ ಪಕ ವಿಠ್ಠಲ ಹೂನೂರು ವಂದಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ಬಾಳಪ್ಪಾ ಎಸ್. ಖನಗಾರ, ಶಿಕ್ಷಕರಾದ ಸಿದ್ದಪ್ಪಾ ಎಚ್. ಸಿತೀಮನಿ, ಸಿದ್ಧಪ್ಪಾ ಎಚ್. ಚೌಗಲಾ, ಸಿದ್ಧಪ್ಪಾ ಎಸ್. ಮಲ್ಕನ್ನವರ, ಹಸನ್‌ಸಾಬ ನವಲಿ, ಮೋಹನ ಎಂ. ಅಂಗಡಿ, ಅನಂತ ಡಿ. ಪಾಖರೆ, ಎಂ.ಎಂ. ಲೋಹಾರ ಹಾಗೂ ಕೆಂಪಣ್ಣ ಕುರಬೇಟ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.