ಹುಕ್ಕೇರಿ: ಗ್ರಾಮ ವಿಕಾಸ ಯೋಜನೆಯಡಿ ತಾಲ್ಲೂಕಿನ ಐದು ಗ್ರಾಮಗಳಿಗೆ ತಲಾ ₹ 75 ಲಕ್ಷ ಮಂಜೂರಾಗಿದೆ. ಅದನ್ನು ಮೂಲಸೌಲಭ್ಯ ಕಲ್ಪಿಸಲು ಬಳಸಲಾಗುವುದು ಎಂದು ಶಾಸಕ ಉಮೇಶ ಕತ್ತಿ ಹೇಳಿದರು. ಅವರು ತಾಲ್ಲೂಕಿನ ಹಣಜ್ಯಾನಟ್ಟಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮ ವಿಕಾಸ ಯೋಜನೆಯಲ್ಲಿ ತಾಲ್ಲೂಕಿನ ಮದಮಕ್ಕನಾಳ, ಹಣಜ್ಯಾನಟ್ಟಿ, ಹುಲ್ಲೋಳಿ ಹಟ್ಟಿ, ಗುಡಸ್ ಮತ್ತು ಹಟ್ಟಿ ಆಲೂರ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದರು. ಈ ಗ್ರಾಮಗಳಲ್ಲಿ ರಸ್ತೆ, ಸಮುದಾಯ ಭವನ ನಿರ್ಮಾಣ, ಕಸ ವಿಲೇವಾರಿ, ಸೋಲಾರ್ ಅಳವಡಿಕೆ, ಜಿಮ್ ಸಾಮಗ್ರಿಗಳನ್ನು ಪೂರೈಸಲಾಗುವುದು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡು ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲಾಗುತ್ತಿದೆ ಎಂದ ಅವರು ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಂಡು ನಿಗದಿತ ಅವಧಿಯಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಎನ್ಆರ್ಡಿಡಬ್ಲೂಪಿ ಯೋಜನೆಯಲ್ಲಿ ಸುಮಾರು ₹ 30 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡ ಕೊಳವೆ ಬಾವಿ ಕೊರೆಯಿಸುವುದು, ಜಲಕುಂಭ ನಿರ್ಮಾಣ ಮತ್ತು ಪೈಪ್ ಲೈನ್ ಅಳವಡಿಸುವ ಕಾಮಗಾರಿಗಳಿಗೆ ಶಾಸಕ ಕತ್ತಿ ಚಾಲನೆ ನೀಡಿದರು.
ಮದಮಕ್ಕನಾಳ ಗ್ರಾಮದಲ್ಲಿ ಅಳವಡಿಸಿದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ಹಾಗೂ ಗ್ರಾಮ ವಿಕಾಸ ಯೋಜನೆಗೆ ಶಾಸಕ ಕತ್ತಿ ಗುದ್ದಲಿ ಪೂಜೆ ನೆರವೇರಿಸಿದರು. ಬೆಣಿವಾಡ ಗ್ರಾಮದಲ್ಲಿ ತಾಲ್ಲೂಕು ಪಂಚಾಯ್ತಿ ಅನುದಾನದಲ್ಲಿ ನಿರ್ಮಿಸಿದ ಮಾರಾಟ ಮಳಿಗೆಗಳು, ಗ್ರಾಮ ಪಂಚಾಯ್ತಿಯ ರಾಜೀವಗಾಂಧಿ ಸೇವಾ ಕೇಂದ್ರವನ್ನು ಉದ್ಘಾಟಿಸಲಾಯಿತು. ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಲಾಯಿತು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಅನುಸೂಯಾ ಪಾಟೀಲ, ತಾಲ್ಲೂಕು ಪಂಚಾಯ್ತಿ ಸದಸ್ಯ ಬಾಳಾಸಾಹೇಬ ನಾಯಿಕ, ಜಿಲ್ಲಾ ಪಂಚಾಯ್ತಿ ಉಪವಿಭಾಗದ ಎಇಇ ಅಜಿತ ಪಾಟೀಲ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಎ.ಬಿ. ಪಟ್ಟಣಶೆಟ್ಟಿ, ಕಿರಿಯ ಎಂಜನಿಯರ್ ಎಸ್.ಡಿ. ಕಾಂಬಳೆ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಬಸು ಮರಡಿ, ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಪರಗೌಡ ಪಾಟೀಲ, ಮೀರಾಸಾಬ ಮುಲ್ತಾನಿ, ಸುರೇಶ ಖಾನಾಪುರಿ, ಪಿಡಿಒ ಅವಿನಾಶ ಹೊಳೆಪ್ಪಗೋಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.