ADVERTISEMENT

ಚಿತ್ರಕಲೆಯ ಮೂಲಕ ವಿಷಯ ಬೋಧನೆ

ಪ್ರಸನ್ನ ಕುಲಕರ್ಣಿ
Published 24 ಡಿಸೆಂಬರ್ 2017, 7:15 IST
Last Updated 24 ಡಿಸೆಂಬರ್ 2017, 7:15 IST
ದೇಮಣ್ಣ ಅವರ ಕುಂಚದಲ್ಲಿ ಮೂಡಿಬಂದ ಕಲಾಕೃತಿ
ದೇಮಣ್ಣ ಅವರ ಕುಂಚದಲ್ಲಿ ಮೂಡಿಬಂದ ಕಲಾಕೃತಿ   

ಖಾನಾಪುರ ತಾಲ್ಲೂಕಿನ ಹಿರೇಮುನವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ದೇಮಣ್ಣ ಮೆಳವಂಕಿ ತಮ್ಮ ಚಿತ್ರಕಲಾ ಪ್ರತಿಭೆಯ ಮೂಲಕ ಪ್ರಕೃತಿಯ ಸೊಬಗು, ಪ್ರಚಲಿತ ವಿದ್ಯಮಾನಗಳು, ವಿವಿಧ ಸಾಧಕರು, ವನ್ಯಮೃಗಗಳು, ನಮ್ಮ ಸುತ್ತಮುತ್ತಲಿನ ನೈಜ ದೃಶ್ಯಗಳು, ಪೌರಾಣಿಕ ಸನ್ನಿವೇಶಗಳು, ವಿವಿಧ ರಂಗಗಳಲ್ಲಿ ಹೆಸರು ಮಾಡಿದ ಸಾಧಕರು, ವಿಜ್ಞಾನದ ವಿಸ್ಮಯಗಳು ಸೇರಿದಂತೆ ತಮ್ಮ ಚಿತ್ರಕಲೆಯ ಮೂಲಕ ವಿದ್ಯಾರ್ಥಿಗಳ ಮನಮುಟ್ಟುವಂತೆ ವಿಷಯವನ್ನು ಬೋಧಿಸಿ ಮಕ್ಕಳ ಪಾಲಿನ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ.

ವೃತ್ತಿಯಲ್ಲಿ ಚಿತ್ರಕಲಾ ಶಿಕ್ಷಕ ಮತ್ತು ಪ್ರವೃತ್ತಿಯಲ್ಲಿ ಹವ್ಯಾಸಿ ಕಲಾವಿದರಾದ ದೇಮಣ್ಣ ಮೆಳವಂಕಿ ಮೂಲತಃ ಬೈಲಹೊಂಗಲ ತಾಲ್ಲೂಕು ಹೊಳಿಹೊಸೂರ ಗ್ರಾಮದವರು. ಚಿತ್ರಕಲೆಯಲ್ಲಿ ಆರ್ಟ್ ಮಾಸ್ಟರ್ ಪದವಿಯನ್ನು ಪಡೆದು 2002ರಿಂದ ಹಿರೇಮುನವಳ್ಳಿ ಪ್ರೌಢಶಾಲೆಯ ಮಕ್ಕಳಿಗೆ ಈ ಕಲೆಯನ್ನು ಕಲಿಸುತ್ತಿದ್ದಾರೆ.

ತಮ್ಮ ಭಿನ್ನ ವಿಭಿನ್ನ ಕಲಾಕೃತಿಗಳ ರಚನೆಯ ಮೂಲಕ ದೇಮಣ್ಣ ಒಬ್ಬ ಚಿತ್ರಕಲಾ ಜಗತ್ತಿನ ಪ್ರತಿಭೆಯಾಗಿದ್ದಾರೆ. ಇದುವರೆಗೂ ಮುಂಜಾನೆಯ ಸೂರ್ಯೋದಯದಿಂದ ಹಿಡಿದು, ಸೂರ್ಯಾಸ್ತದ ವರೆಗೆ ನಮ್ಮ ದೈನಂದಿನ ಜೀವನದಲ್ಲಿ ಕಾಣಸಿಗುವ, ಆಗುಹೋಗುವ, ಅನುಭವಿಸುವ ಹಲವಾರು ಬಗೆ ಬಗೆಯ ಪ್ರಕೃತಿಯ ವಿಸ್ಮಯಗಳು, ಶಹರ ಜೀವನದ ಸೊಬಗು, ಗ್ರಾಮೀಣ ಬದುಕಿನ ಚಿತ್ರಣ ಸೇರಿದಂತೆ ನಾನಾ ಪ್ರಕಾರಗಳು ಇವರ ಕುಂಚದಿಂದ ಮೂಡಿ ಬಂದಿವೆ.

ADVERTISEMENT

ಇವರ ಕಲಾ ಸೇವೆಯನ್ನು ಪರಿಗಣಿಸಿದ ಬೆಂಗಳೂರಿನ ಕರ್ನಾಟಕ ಪ್ರತಿಭಾ ಆಕಾಡಮಿ ಭಾರತ ರತ್ನ ಡಾ. ರಾಧಾಕೃಷ್ಣನ್ ಪ್ರಶಸ್ತಿ ನೀಡಿ ಗೌರವಿಸಿದೆ. ಇದರ ಜೊತೆಗೆ ಶಿಕ್ಷಣ ಇಲಾಖೆಯ ವತಿಯಿಂದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದ ಅಂಗವಾಗಿ 2010 ಪ್ರತಿಭಾನ್ವಿತ ಶಿಕ್ಷಕ ಪ್ರಶಸ್ತಿ, 2010ರಲ್ಲಿ ರಾಜ್ಯ ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ, ಪ್ರಸಕ್ತ ವರ್ಷದ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 2011ರಲ್ಲಿ ವಲಯ ಮಟ್ಟದ ಕಲಾ ಪ್ರತಿಭೋತ್ಸವದ ಪ್ರಯುಕ್ತ ಜರುಗಿದ ಚಿತ್ರಕಲಾ ಸ್ಪರ್ಧೆಯ ಯುವ ಪ್ರತಿಭೆ ವಿಭಾಗದಲ್ಲಿ ಉತ್ತಮ ಚಿತ್ರಕಲಾವಿದ ಸೇರಿದಂತೆ ಹಲವು ಬಿರುದು ಬಿಮ್ಮಾನಗಳು ಇವರ ಸಾಧನೆಗೆ ಸಂದಿವೆ. 2011ರಲ್ಲಿ ಬೆಳಗಾವಿಯಲ್ಲಿ ಜರುಗಿದ ವಿಶ್ವ ಕನ್ನಡ ಸಮ್ಮೇಳನ, ಕಿತ್ತೂರು ಉತ್ಸವಗಳಲ್ಲಿ ಇವರ ಕಲಾಕೃತಿಗಳು ಜನಮನ್ನಣೆ ಗಳಿಸಿವೆ.

ಮಕ್ಕಳ ಮೆಚ್ಚಿನ ಶಿಕ್ಷಕ

ದೇಮಣ್ಣ ಮೆಳವಂಕಿ ಚಿತ್ರಕಲಾ ಶಿಕ್ಷಕರಾಗಿದ್ದರೂ ಶಾಲೆಯ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ, ಸಮಾಜ ವಿಷಯಗಳಲ್ಲಿ ಬರುವ ಚಿತ್ರಗಳನ್ನು ಸರಾಗವಾಗಿ ಬಿಡಿಸಿಕೊಡುವ ಕಲೆಯನ್ನು ಮಕ್ಕಳಿಗೆ ಹೇಳಿಕೊಡುವ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ, ವಿಭಾಗ ಮತ್ತು ರಾಜ್ಯಮಟ್ಟದಲ್ಲಿ ಮಿಂಚಿದ್ದಾರೆ. ಅಪ್ಪಣ್ಣ ಅಂಬಗಿ, ಮುಖ್ಯಾಧ್ಯಾಪಕರು.

ನಮ್ಮ ಡ್ರಾಯಿಂಗ್ ಸರ್ ಕ್ಲಾಸ್ ಅಟೆಂಡ್ ಮಾಡೂದು ಅಂದ್ರ ನಮಗ್ ಭಾಳ ಖುಷಿ. ಅವರು ನಮಗ ಪಾಠದಾಗ ಬರೋ ಎಲ್ಲಾ ಡ್ರಾಯಿಂಗ್ ಹ್ಯಾಂಗ್ ಬಿಡಿಸೂದು ಅಂತ ಸರಳವಾದ ವಿಧಾನದಾಗ ಹೇಳಿ ಕೊಡ್ತಾರ. ನಾವ್ ತಪ್ಪಿದರ ನಮಗ ತಿಳಿಸಿ ಹೇಳತಾರ. ತಾವು ಬಿಡಿಸಿದ ಚಿತ್ರಗಳನ್ನ ನಮಗ ತೋರಿಸಿ ಅವರಂತ ನಾವೂ ಚಿತ್ರ ಬಿಡಿಸಾಕ ಪ್ರೇರಣಾ ಕೊಡ್ತಾರ. ಹಿಂಗಾಗಿ ಅವರು ನಮ್ಮ ಪಾಲಿನ ಫೇವರಿಟ್ ಟೀಚರ್. ಬಸವರಾಜ್. 9ನೇ ತರಗತಿ ವಿದ್ಯಾರ್ಥಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.