ಮೋಳೆ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತದಿಂದ ಜನ ಬೇಸತ್ತಿದ್ದಾರೆ. ರಾಜ್ಯದಾದ್ಯಂತ ಈ ಬಾರಿ ಬಿಜೆಪಿ ಪರ ಅಲೆಯಿದ್ದು 2018 ರಲ್ಲಿ ಮತ್ತೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಕಾಗವಾಡ ಶಾಸಕ ರಾಜು ಕಾಗೆ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಮಂಗಳವಾರ ಚಿಕ್ಕ ನೀರಾವರಿ ಇಲಾಖೆಯಿಂದ ನವಲಿಹಾಳ ಹಳ್ಳಕ್ಕೆ ₨ 1 ಕೋಟಿ, ನಾಗನೂರ ಪಿಎ ಅಗ್ರಾಣಿ ಹಳ್ಳಕ್ಕೆ ₨ 1.80 ಕೋಟಿ ವೆಚ್ಚದ ಬಾಂಧಾರ ನಿರ್ಮಾಣ ಹಾಗೂ ತಾಂವಶಿ ಗ್ರಾಮದಿಂದ ನಾಗನೂರ ಪಿಎ ವರೆಗೆ ₨ 1 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
‘ನಮ್ಮ ನಡೆ ಕೃಷ್ಣೆಯ ಕಡೆಗೆ’ ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೃಷ್ಣಾ ಕೊಳ್ಳದ ಬಸವೇಶ್ವರ ಏತ ನೀರಾವರಿ ಯೋಜನೆ ಶಂಕುಸ್ಥಾಪನೆಯಾಗಿ 8 ತಿಂಗಳು ಗತಿಸಿದರೂ ಕಾಮಗಾರಿ ಇನ್ನು ಮಂದಗತಿಯಲ್ಲಿ ಸಾಗಿದೆ. ಬರುವ 2018 ರಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದ ಒಂದೂವರೆ ವರ್ಷಗಳಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿ ಮುಖ್ಯಮಂತ್ರಿ ಆಗಲಿರುವ ಯಡಿಯೂರಪ್ಪನವರಿಂದ ಉದ್ಘಾಟಿಸಿ ಈ ಭಾಗವನ್ನು ಸಂಪೂರ್ಣ ಹಸಿರುಮಯ ಮಾಡಲಾಗುವುದು ಎಂದು ಹೇಳಿದರು.
ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇರುವದರಿಂದ ರಾಜ್ಯ ಕಾಂಗ್ರೆಸ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಮುಖಂಡರಾದ ವಿನಾಯಕ ಬಾಗಡಿ, ನಿಂಗಪ್ಪ ಖೋಕಲೆ, ಗಜಾನನ ಯರಂಡೋಲಿ, ಘೂಳಪ್ಪ ಜತ್ತಿ, ಶಿವಾನಂದ ಗೊಲಬಾವಿ ರಮೇಶ ಪಾಟೀಲ, ರಾಜು ಕಾಂಬಳೆ, ಅಧಿಕಾರಿಗಳಾದ ಸಿ. ಡಿ. ಪಾಟೀಲ, ಕೆ. ಸಿ. ಬಿಳಗಿ, ಡಿ. ಎನ್. ಆಸಂಗಿ, ಎಚ್. ಬಿ. ದಳವಾಯಿ, ಗುತ್ತಿಗೆದಾರರಾದ ಮಲ್ಲಿಕಾರ್ಜುನ ಹಳ್ಳಿ, ಎಚ್. ಬಿ. ದಳವಾಯಿ, ಪ್ರವೀಣ ಪಾಟೀಲ, ಹೊಳೆಪ್ಪ ತೇಲಿ, ರವಿಕಾಂತ ಪಾಟೀಲ, ಶಿವಾನಂದ ಮಾಲಗಾಂವೆ, ಗಿರೀಶ ಶಿರಗೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.