ADVERTISEMENT

ಜಲಾಶಯದಿಂದ ಕಾಲುವೆಗೆ ನೀರು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 9:53 IST
Last Updated 20 ಏಪ್ರಿಲ್ 2017, 9:53 IST

ಚಿಕ್ಕೋಡಿ: ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಹಾಗೂ ಚಿಕ್ಕೋಡಿ ಉಪ ಕಾಲುವೆಗಳಿಗೆ ಮಂಗಳವಾರ ರಾತ್ರಿಯಿಂದ ನೀರು ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ, ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ ತಿಳಿಸಿದ್ದಾರೆ.ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಈ ಭಾಗದ ಸಾರ್ವಜನಿಕರ ಮನವಿಗೆ ಸ್ಪಂದಿಸಿರುವ ಸಂಸದ ಪ್ರಕಾಶ ಹುಕ್ಕೇರಿ ಮತ್ತು ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ಶಾಸಕ, ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿಯವರ ಪ್ರಯತ್ನದ ಫಲವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಈ ಭಾಗದ ಸಾರ್ವಜನಿಕರ ಮನವಿಗೆ ಸ್ಪಂದಿಸಿ ಹಿಡಕಲ್‌ ಜಲಾಶಯದಿಂದ ಒಟ್ಟು 3 ಟಿಎಂಸಿ ಅಡಿ ನೀರನ್ನು ಮಂಗಳವಾರ ರಾತ್ರಿಯಿಂದಲೇ ಚಿಕ್ಕೋಡಿ ಉಪ ಕಾಲುವೆಗಳಿಗೆ ಹರಿಸಲಾಗುತ್ತಿದ್ದು, ತಾಲ್ಲೂಕಿನ ಜನರು ಈ ನೀರನ್ನು ಕುಡಿಯಲು ಮಾತ್ರ ಬಳಸುವಂತೆ ಸಂಸದ ಪ್ರಕಾಶ ಹುಕ್ಕೇರಿ ಮತ್ತು ಗಣೇಶ ಹುಕ್ಕೇರಿ ಅವರು ಮನವಿ ಮಾಡಿದ್ದಾರೆ.

ಪ್ರಸ್ತುತ ವರ್ಷದ ಮಳೆಯ ಅಭಾವ ದಿಂದಾಗಿ ಚಿಕ್ಕೋಡಿ ತಾಲ್ಲೂಕನ್ನು ಸರ್ಕಾರ ಹಿಂಗಾರು ಅವಧಿಯಲ್ಲಿ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದ್ದು, ತಾಲ್ಲೂಕಿನ ಕಬ್ಬೂರ, ಕೇರೂರ, ಜೋಡಕುರಳಿ, ಹಿರೇಕುಡಿ, ಬಸವನಾಳಗಡ್ಡೆ, ನಾಗರಾಳ, ಶಿರಗಾಂವ, ನೇಜ, ಚಿಕ್ಕಲವಾಳ, ಖಡಕಲಾಟ ಹಾಗೂ ಇತರ ಗ್ರಾಮಗಳ ಜನಸಾಮಾನ್ಯರಿಗೆ ಮತ್ತು ಜಾನುವಾರು ಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಿತ್ತು.

ADVERTISEMENT

ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿ ಹೊಳಿ ಅವರ ನೇತೃತ್ವದಲ್ಲಿ ಬೆಳಗಾವಿ ಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸಚಿವರ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಗಳು ನೀರು ಬಿಡುಗಡೆಗೆ ಆದೇಶ ಹೊರಡಿ ಸಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚಿಕ್ಕೋಡಿ ಸಿಬಿಸಿ ಕಾಲುವೆಗೆ ಹಿಡಕಲ್ ಜಲಾಶಯದಿಂದ ನೀರು ಹರಿಸಲಾಗುತ್ತಿದೆ ಎಂದು ವಿವರಿಸಿದರು.

ಈ ಭಾಗದಲ್ಲಿ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದ್ದನ್ನು ಗಮನದಲ್ಲಿ ಇಟ್ಟುಕೊಂಡು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ತಾವು ಕಳೆದ ಏಪ್ರಿಲ್ 9ರಂದು ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು, ಹಿಡಕಲ್ ಜಲಾಶಯ ದಿಂದ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೆವು ಎಂದು ಗಣೇಶ ಹುಕ್ಕೇರಿ ತಿಳಿಸಿದ್ದಾರೆ.

ಮಳೆಯಾಗದೇ ಬರ ಸ್ಥಿತಿ ಅನುಭವಿಸುತ್ತಿರುವ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೋಸ್ಕರ ಘಟಪ್ರಭಾ ಎಡದಂಡೆ, ಬಲದಂಡೆ ಹಾಗೂ ಸಿಬಿಸಿ ಕಾಲುವೆಗಳಿಗೆ ತಲಾ 1 ಟಿಎಂಸಿ ಅಡಿ ನೀರು ಬಿಡುಗಡೆ ಆಗಲಿದೆ ಎಂದರು.ಈಗಾಗಲೇ ಹಿಡಕಲ್ ಜಲಾಶಯ ದಲ್ಲಿ 6 ಟಿಎಂಸಿ ನೀರು ಸಂಗ್ರಹ ಇರುವುದರಿಂದ ಕೇವಲ ಕುಡಿಯುವ ನೀರಿಗಾಗಿ ಈ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕಾಲುವೆಗಳಿಗೆ ರೈತರು ಮೋಟಾರ್ ಪಂಪ್‌ಸೆಟ್ ಹಾಗೂ ಸೈಫನ್‌ಗಳನ್ನು ಬಳಕೆ ಮಾಡಬಾರದು. ರೈತರು ಅಧಿಕಾರಿಗಳೊಂದಿಗೆ ಸಹಕರಿಸಿ ಕೊಂಡು ಹೋಗಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.