ADVERTISEMENT

‘ದೇಶಕ್ಕೆ ದಾರ್ಶನಿಕರ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 9:07 IST
Last Updated 13 ಡಿಸೆಂಬರ್ 2017, 9:07 IST

ಬೈಲಹೊಂಗಲ: ‘ಭಾರತದ ಸಂಸ್ಕೃತಿಗೆ ಉನ್ನತ ಸ್ಥಾನವಿದೆ. ಈ ಮಣ್ಣಿನಲ್ಲಿ ಜನಿಸಿದ ಪ್ರತಿಯೊಬ್ಬರೂ ಭಾರತೀಯ ಪರಂಪರೆ ಉಳಿಸಿ, ಬೆಳೆಸಿಕೊಂಡು ಹೋಗಬೇಕು’ ಎಂದು ಮುಖಂಡ ಮಹಾಂತೇಶ ಕೌಜಲಗಿ ಹೇಳಿದರು.

ಪಟ್ಟಣದ ಹೊಸೂರ ರಸ್ತೆಯ ಶಿವಾನಂದ ಮಠದಲ್ಲಿ ತಿಂಗಳವರೆಗೆ ನಡೆಯಲಿರುವ ಶಿವಶರಣೆ ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ದೇಶದ ಸಂಸ್ಕೃತಿಗೆ ಹಲವಾರು ದಾರ್ಶನಿಕರು ಅಧ್ಯಾತ್ಮ ಮೌಲ್ಯ ನೀಡಿದ್ದಾರೆ. ಈ ಮೌಲ್ಯ ಉಳಿಸಿ ಬೆಳೆಸುವುದು ನಮ್ಮೆಲ್ಲರ ಮೇಲಿದೆ. ಶಿವಾನಂದ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ ಅನೇಕ ವರ್ಷಗಳಿಂದ ಅಧ್ಯಾತ್ಮ ಪ್ರವಚನವನ್ನು ಭಕ್ತರಿಗೆ ಉಣಬಡಿಸಿ ಧಾರ್ಮಿಕ ಪರಂಪರೆ ಬೆಳೆಸುವ ಶ್ರೇಷ್ಠ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ’ ಎಂದರು.

ADVERTISEMENT

ಮುರಗೋಡ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಧಾರ್ಮಿಕ ಆಚರಣೆಗಳು ಉನ್ನತ ಮೌಲ್ಯ ಬಿತ್ತಲು ಪ್ರೇರಕವಾಗಿವೆ. ಶ್ರೀಮಠದಲ್ಲಿ ಅಭ್ಯಸಿಸಿದ ಅನೇಕ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಎಷ್ಟೇ ದೂರವಿದ್ದರೂ ಮಠದ ಸೇವೆ ಮಾಡಲು ಮುಂದಾಗಬೇಕು’ ಎಂದು ತಿಳಿಸಿದರು.

ಪುರಸಭೆ ಸದಸ್ಯ ಮಹಾಂತೇಶ ತುರಮರಿ ಮಾತನಾಡಿ, ‘ಶಿವಾನಂದ ಮಠ ಬಡ ವಿದ್ಯಾರ್ಥಿಗಳಿಗೆ ದಾಸೋಹ, ವಸತಿ ವ್ಯವಸ್ಥೆ ಕಲ್ಪಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾಗುತ್ತಿದೆ. ಪ್ರವಚನದಂತಹ ಧಾರ್ಮಿಕ ಕಾರ್ಯಕ್ರಮಗಳು ಮಠದಿಂದ ಹೆಚ್ಚೆಚ್ಚು ನಡೆಯಲಿ’ ಎಂದು ಹಾರೈಸಿದರು.

ಶಿವಾನಂದ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ, ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರನ್ನತಿಮ್ಮಾಪುರ ಬಸವರಾಜ ಸ್ವಾಮೀಜಿ ಪ್ರವಚನ ನೀಡಿದರು. ಓಬಳಾಪುರ ಸದಾಶಿವಾನಂದ ಸ್ವಾಮೀಜಿ, ಹಣ್ಣಿಕೇರಿ ಬಸವರಾಜ ಶರಣರು, ಶಿವಾನಂದ ಮಠದ ಸದಾಶಿವಾನಂದ ಸ್ವಾಮೀಜಿ, ನಿವೃತ್ತ ಶಿಕ್ಷಕ ಎನ್.ಎಚ್. ಕುಲಕರ್ಣಿ, ಮರ್ಚಂಟ್ ಬ್ಯಾಂಕ್‌ ಅಧ್ಯಕ್ಷ ಬಸವರಾಜ ಮೂಗಿ, ಮುಖಂಡರಾದ ಮಲ್ಲನಗೌಡ ಪಾಟೀಲ, ಬಸವಫ್ರಭು ಬೆಳಗಾವಿ, ಮಡಿವಾಳಪ್ಪ ಸೊಗಲ, ಪರಮೇಶಪ್ಪ ಗೂಳಪ್ಪನವರ, ವಿಶ್ವನಾಥ ಗಡತರನವರ ಇದ್ದರು. ಶಿಕ್ಷಕ ಚಂದ್ರಕಾಂತ ಸಿದ್ದಸಮುದ್ರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.