ADVERTISEMENT

ಭೂ ವಿವಾದ: ಸಹೋದರರ ಕೊಲೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2015, 9:19 IST
Last Updated 6 ಜುಲೈ 2015, 9:19 IST

ಗೋಕಾಕ: ಕಳೆದ ಎರಡು ದಶಕಗಳಿಂದ ಎರಡು ಕುಟುಂಬಗಳ ನಡುವೆ ಇದ್ದ ಭೂ ವಿವಾದವೊಂದು ಒಂದೇ ಕುಟುಂಬಕ್ಕೆ ಸೇರಿದ ಸಹೋದರರ ಕೊಲೆಯಲ್ಲಿ ಪರ್ಯವಸಾನಗೊಂಡ  ಘಟನೆ ಇಲ್ಲಿಗೆ ಸಮೀಪದ ಕೊಳವಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಎರಡು ಕುಟುಂಬಗಳ ನಡುವಿನ ಕಲಹಕ್ಕೆ ಬಲಿಯಾದವರನ್ನು ಕೊಳವಿ ಗ್ರಾಮದ ನಿವಾಸಿಗಳಾದ ರಾಮಚಂದ್ರ ಸದಾನಂದ ಹಿರಟ್ಟಿ (35) ಮತ್ತು ಆತನ ಸಹೋದರ ಮಲ್ಲಪ್ಪ (25) ಎಂದು ಗುರುತಿಸಲಾಗಿದೆ.

ಭೂ ವಿವಾದಕ್ಕೆ ಸಂಬಂಧಿಸಿದಂತೆ ಶನಿವಾರ ಗ್ರಾಮದ ಅವರ ಮನೆ ಪ್ರವೇಶಿಸಿದ ಆರೋಪಿಗಳು ಮೊದಲು ಇಬ್ಬರೂ ಸಹೋದರರ ಕಣ್ಣಿಗೆ ಖಾರದ ಪುಡಿ ಎರಚಿ, ನಂತರ ಕೊಡಲಿ, ಕಬ್ಬಿಣ ಸರಳು, ಹರಿತವಾದ ಮಾರಕಾಸ್ತ್ರಗಳಿಂದ ಅವರ ತಲೆ ಮತ್ತು ಮುಖಕ್ಕೆ ಚಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅದೇ ಗ್ರಾಮದ ಬಾಳಪ್ಪ ಯಮನಪ್ಪ ಮೆಳವಂಕಿ, ಆತನ ಪತ್ನಿ ಭೀಮವ್ವ, ಪುತ್ರ ಸಿದ್ದಪ್ಪ ಮತ್ತು ಪುತ್ರಿ ತಾಲ್ಲೂಕಿನ ಪಾಮಲದಿನ್ನಿ ಗ್ರಾಮದ ನಿವಾಸಿ ಪಾರ್ವತಿ ಮಲ್ಲಪ್ಪ ಕೌಜಲಗಿ ಎಂಬುವ ವರೇ ಈ ಕೊಲೆಗೈದಿದ್ದಾರೆ ಎಂದು ಕೊಲೆಗೀಡಾದವರ ತಂದೆ ಸದಾನಂದ ಯಲ್ಲಪ್ಪ ಹಿರಟ್ಟಿ ಭಾನುವಾರ ಗ್ರಾಮಾಂ ತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗೋಕಾಕ ಸಿಪಿಐ ಎಸ್‌.ಆರ್‌. ಕಟ್ಟಿಮನಿ, ಗ್ರಾಮಾಂತರ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್‌ ಬಿಗಿ ಭದ್ರತೆ ಕಲ್ಪಿಸಿದ್ದಾರೆ.

ವಿಷ ಸೇವಿಸಿ ಆತ್ಮಹತ್ಯೆ
ಬೈಲಹೊಂಗಲ:
ಹೊಟ್ಟೆ ನೋವು ತಾಳಲಾರದೆ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ. ಮೌನೇಶ್ವರ ನಗರ ನಿವಾಸಿ ಶಶಿಕಾಂತ ಸಹದೇವಪ್ಪ ಮಾಳೋದೆ (45) ಆತ್ಮಹತ್ಯೆಗೆ ಶರಣಾದವ. ಪ್ರಕರಣ ಸ್ಥಳೀಯ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.