ಬೈಲಹೊಂಗಲ: ‘ಮನುಷ್ಯನಾಗಿ ಹುಟ್ಟಿದ ಮೇಲೆ ಉತ್ತಮ ಜೀವನ ನಡೆಸಿ ಪರಮಾತ್ಮನ ಕೃಪೆಗೆ ಪಾತ್ರರಾಗಬೇಕು. ಜಾತಿ, ಮತ, ಭೇದಭಾವ ಮರೆತು ಎಲ್ಲರೂ ಒಂದಾಗಿ ಬಾಳಿ ವಿಶ್ವ ಶಾಂತಿ ನೆಲೆಸಬೇಕು’ ಎಂದು ಇಂಚಲ ಶಿವಯೋಗೇಶ್ವರ ಸಾಧು ಸಂಸ್ಥಾನ ಮಠದ ಪೀಠಾಧಿಪತಿ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.
ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದ ಶಿವಯೋಗೀಶ್ವರ ಸಾಧು ಸಂಸ್ಥಾನಮಠದಲ್ಲಿ ನಡೆದಿರುವ 47 ನೇ ವೇದಾಂತ ಪರಿಷತ್ ಹಾಗೂ ಡಾ. ಶಿವಾನಂದ ಭಾರತಿ ಸ್ವಾಮೀಜಿ ಅವರ 77ನೇ ಜಯಂತ್ಯುತ್ಸವ ಮತ್ತು ಜಾತ್ರಾ ಮಹೋತ್ಸವದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
‘ಗುರುವಿನ ಕೃಪೆ ಇದ್ದರೆ ಮಾತ್ರ ಮನುಷ್ಯ ದೇವನಾಗಬಲ್ಲ. ಪರಮಾತ್ಮನಲ್ಲಿ ಶ್ರೇಷ್ಠತೆ ಪಡೆಯಬಲ್ಲ. ಗುರುವಿನ ಕರುಣೆ ಸಾಕ್ಷಾತ್ಕಾರವಾದಾಗ ಮಾತ್ರ ಮಾನವ ಬದುಕು ಸಾರ್ಥಕತೆ ಪಡೆಯುತ್ತದೆ. ಬದುಕಿನ ಒತ್ತಡ ಹೋಗಲಾಡಿಸಲು ಇಂದಿನ ಯುವ ಪೀಳಿಗೆಗೆ ಗುರುವಿನ ಸಂಘ ಅತೀ ಅವಶ್ಯವಾಗಿದೆ’ ಎಂದರು.
ಮಲ್ಲಾಪೂರದ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ ಮಾತನಾಡಿ, ‘ಸದ್ಗುಣಗಳಿಂದ ಕೂಡಿದ ಗುರು ಇಡೀ ಸಮಾಜವನ್ನೇ ಬದಲಾವಣೆ ಮಾಡುವ ಶಕ್ತಿ ಹೊಂದಿದ್ದಾನೆ. ಇದಕ್ಕೆ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರೇ ಸಾಕ್ಷಿಯಾಗಿದ್ದಾರೆ. ಇಂಚಲ ಸಾಧು ಸಂಸ್ಥಾನಮಠದ ಮೂಲಕ ಭಕ್ತರಿಗೆ ಅನೇಕ ವಿಧಾಯಕ ಕಾರ್ಯಗಳನ್ನು ನೆರವೇರಿಸುತ್ತಿರುವದು ಹೆಮ್ಮೆ ತಂದಿದೆ’ ಎಂದರು.
ಬೆಳಗ್ಗೆ ಶಿವಯೋಗಿಶ್ವರತ್ರಯರ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು. ಹಂಪಿ ಹೇಮಕೂಟದ ಶಿವರಾಮಾ ವಧೂತಶ್ರಮದ ಮಠದ ಪೀಠಾಧಿಪತಿ ವಿದ್ಯಾನಂದ ಭಾರತಿ ಸ್ವಾಮೀಜಿ ಅವರು ಪ್ರಣವ ಧ್ವಜಾರೋಹಣ ನೆರವೇರಿಸಿದರು. ಅರವಳ್ಳಿ, ಇಂಚಲ ಗ್ರಾಮಸ್ಥರಿಂದ ಶ್ರೀಗಳ ತುಲಾಭಾರ ಸೇವೆ ನಡೆಯಿತು. ಹಿಪ್ಪರಗಿ ಕುಮಾರ ಸಿದ್ಧಾರೂಢ ಶರಣರು, ಕಾಶಿ ಪೂರ್ಣಾನಂದ ಸ್ವಾಮೀಜಿ, ಮಲ್ಲೇಶಿ ಶರಣರು ಹಾಗೂ ನಾಡಿನ ವಿವಿಧ ಮಠಾಧೀಶರು, ಮಾತೆಯರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.