ADVERTISEMENT

ಸ್ವ ಸಹಾಯ ಸಂಘಗಳ ಉದ್ಯೋಗ ಮೇಳ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 9:42 IST
Last Updated 15 ಜುಲೈ 2017, 9:42 IST

ಬೈಲಹೊಂಗಲ: ‘ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮಹಿಳೆಯರಿಗೆ ಸ್ಫೂರ್ತಿ ತುಂಬುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಿದೆ. ಇದು ಉತ್ತಮ ಬೆಳವಣಿಗೆಗೆ ಸಹಕಾರಿ ಆಗಿದೆ’ ಎಂದು ಮಾಜಿ ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮತ್ತು ಪುರಸಭೆ ವತಿಯಿಂದ ಶುಕ್ರವಾರ ನಡೆದ ಸ್ವ ಸಹಾಯ ಸಂಘಗಳ ಸ್ವ ಉದ್ಯೋಗ ಮೇಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

’ಧರ್ಮಸ್ಥಳ ಯೋಜನೆಯು ಕೇವಲ ಸ್ವಸಹಾಯ ಸಂಘಗಳಲ್ಲದೇ ಕೃಷಿ, ಸ್ವಉದ್ಯೋಗ, ಪಿಂಚಣಿ, ಜ್ಞಾನ ವಿಕಾಸ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಮಾಜಿಕ, ಆರ್ಥಿಕ ಸುಧಾರಣೆಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ.

ADVERTISEMENT

ಸಾರ್ವಜನಿಕರು ಅದರಲ್ಲೂ ಮಹಿಳೆಯರು ಇದರ ಉಪಯೋಗ ಪಡೆದು ಅಭಿವೃದ್ಧಿ ಹೊಂದಬೇಕು. ಮಹಿಳೆಯರು ಸ್ವ ಸಹಾಯ ಸಂಘಗಳ ಸ್ವ ಉದ್ಯೋಗ ಮೇಳದ ಲಾಭ ಪಡೆದುಕೊಂಡು ನೆಮ್ಮದಿಯ ಜೀವನ ಸಾಗಿಸಬೇಕು’ ಎಂದರು.

ತಹಶೀಲ್ದಾರ್ ಪ್ರಕಾಶ ಗಾಯಕವಾಡ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆ ಕಾರ್ಯ ಪ್ರಶಂಸನೀಯವಾಗಿದೆ ಎಂದರು.

ಜಿಲ್ಲಾ ನಿರ್ದೇಶಕ ಸುರೇಶ ಮೊಯಿಲಿ ಮಾತನಾಡಿ, ಮಹಿಳೆಯರು ಆರ್ಥಿಕ, ಸಾಮಾಜಿಕ, ಮಾನಸಿಕವಾಗಿ ಪ್ರಭಾವಿ ಗಳಾಗಿ ಬೆಳೆಯಲು ಧರ್ಮಸ್ಥಳ ಯೋಜನೆ ಸ್ವ ಸಹಾಯ ಸಂಘಗಳ ಸ್ವ ಉದ್ಯೋಗ ಮೇಳ ನಡೆಸಿ ಮಹಿಳೆಯರ ಉತ್ತೇಜನಕ್ಕೆ ಹೆಚ್ಚಿನ ಒತ್ತು ನೀಡಿದೆ. ಮಹಿಳೆಯರು ಯೋಜನೆಯ ಲಾಭ ಪಡೆದುಕೊಂಡು ಸ್ವಾವಲಂಬಿಗಳಾಗಿ ಬದುಕು ಸಾಗಿಸಬೇಕು ಎಂದರು.

ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ರಾಜಶೇಖರ ಮೂಗಿ, ವಿರುಪಾಕ್ಷ ವಾಲಿ, ಸದುರುದ್ದೀನ ಅತ್ತಾರ, ಶೋಭಾ ವಾಲಿ, ದಾಕ್ಷಾಯಿಣಿ ಮೆಟಗುಡ್ಡ, ಸಂಜೀವಗೌಡ ಪಾಟೀಲ, ಸೆಲ್ಕೋ ಸೋಲಾರನ ವಿನಾಯಕ ಹೆಗಡೆ ವೇದಿಕೆಯಲ್ಲಿ ಇದ್ದರು.

ತಾಲ್ಲೂಕು ಯೋಜನಾಧಿಕಾರಿ ನಾಗರಾಜ ನಾಯ್ಕ ಸ್ವಾಗತಿಸಿದರು. ವಿಜಯಲಕ್ಷ್ಮೀ ನಿರೂಪಿಸಿದರು. ಸುನಂದಾ ಪ್ರಾರ್ಥಿಸಿದರು. ಇದೇ ವೇಳೆ ಸ್ವ ಸಹಾಯ ಸಂಘದಿಂದ ವಸ್ತುಗಳ ಪ್ರದರ್ಶನ, ಮಾರಾಟ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.