ADVERTISEMENT

ಅಡಿಗರಿಗೆ ಸಮಾಜ ಅನ್ಯಾಯ ಮಾಡಿತು: ನಿಸಾರ್‌

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಗೊಪಾಲಕೃಷ್ಣ ಅಡಿಗ ಅವರ ಭಾವಚಿತ್ರಕ್ಕೆ (ಎಡದಿಂದ) ಅಡಿಗರ ಮಗ ಎಂ.ಜಿ.ಪ್ರದ್ಯುಮ್ನ, ಕೆ.ಎಸ್‌.ನಿಸಾರ್‌ ಅಹಮದ್‌, ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್‌, ಮನು ಬಳಿಗಾರ್‌ ಹಾಗೂ ಪರಿಷತ್ತಿನ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಪುಷ್ಪನಮನ ಸಲ್ಲಿಸಿದರು  –ಪ್ರಜಾವಾಣಿ ಚಿತ್ರ
ಗೊಪಾಲಕೃಷ್ಣ ಅಡಿಗ ಅವರ ಭಾವಚಿತ್ರಕ್ಕೆ (ಎಡದಿಂದ) ಅಡಿಗರ ಮಗ ಎಂ.ಜಿ.ಪ್ರದ್ಯುಮ್ನ, ಕೆ.ಎಸ್‌.ನಿಸಾರ್‌ ಅಹಮದ್‌, ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್‌, ಮನು ಬಳಿಗಾರ್‌ ಹಾಗೂ ಪರಿಷತ್ತಿನ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಪುಷ್ಪನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕವಿ ಗೋಪಾಲಕೃಷ್ಣ ಅಡಿಗ ಅವರಿಗೆ ಸಮಾಜ ಅನ್ಯಾಯ ಮಾಡಿತು’ ಎಂದು ಹಿರಿಯ ಕವಿ ಕೆ.ಎಸ್‌.ನಿಸಾರ್‌ ಅಹಮದ್‌ ಅವರು ವಿಷಾದ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಶನಿವಾರ ಏರ್ಪಡಿಸಿದ್ದ ‘ಡಾ.ಗೋಪಾಲಕೃಷ್ಣ ಅಡಿಗರ ಜನ್ಮ ಶತಮಾನೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಷಯವೊಂದರ ಕುರಿತ ಭಿನ್ನಾಭಿಪ್ರಾಯಗಳನ್ನು ಅಡಿಗರು ತಕ್ಷಣ ವ್ಯಕ್ತಪಡಿಸುತ್ತಿದ್ದರು. ಕೊನೆಯವರೆಗೂ ಅವರಿಗೆ ನಿರ್ದಿಷ್ಟ ನೆಲೆ ಹಾಗೂ ಉದ್ಯೋಗ ಇರಲಿಲ್ಲ. ಕೆಲವರು ಅವರ ಸ್ಥಾನಮಾನವನ್ನು ಹೇಗೆ ಬೇಕು ಹಾಗೆ ಬಳಸಿಕೊಂಡರು’ ಎಂದು ಬೇಸರಿಸಿದರು.

ADVERTISEMENT

‘ಅವರ ಬರವಣಿಗೆ ಮೇಲ್ನೋಟಕ್ಕೆ ನಿರ್ದಿಷ್ಟ ವರ್ಗ ಹಾಗೂ ಬುದ್ಧಿಜೀವಿಗಳಿಗೆ ಸೀಮಿತ ಎಂಬಂತೆ ತೋರುತ್ತದೆ. ರಾಜಕೀಯ ಮತ್ತು ಸಾಮಾಜಿಕ ಧೋರಣೆಗಳನ್ನು ಅಡಿಗರು ಅಭಿವ್ಯಕ್ತಿಗೊಳಿಸಿದಂತೆ ಬೇರೆಯವರು ಬರೆಯಲಿಲ್ಲ. ಅವರ ಬರಹಗಳು ತುಟಿತುದಿ ಮಾತಲ್ಲ. ಅನುಭವದಿಂದ ಬಂದವು’ ಎಂದರು.

‘ಸ್ವಾತಂತ್ರ್ಯ ನಂತರದ ನಾತಾವರಣ ಕಂಡು ಅವರು ಮರುಗಿದರು. ಅವರ ಬರವಣಿಗೆಯಲ್ಲಿ ಮಾನವೀಯತೆ ಇದೆ. ಅದು ಇಂದಿನ ಬರಹಗಾರರಲ್ಲಿ ಇಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಅಡಿಗರು ದಿನಕ್ಕೊಂದು ಪದ್ಯ ಒಸೆಯಲಿಲ್ಲ. ಕೃತಿಯನ್ನು ಲೇಖಕ ಅರ್ಥೈಸಬಾರದು. ಓದುಗರೇ ಅರ್ಥ ಮಾಡಿಕೊಳ್ಳಬೇಕೆಂಬುದು ಅವರು ಅಭಿಪ್ರಾಯವಾಗಿತ್ತು’ ಎಂದರು.

‘ಸಮಾಜದ ಸ್ಥಾನಮಾನದಲ್ಲಿ ಬಡ್ತಿ ಪಡೆಯಲು ವಿರ್ಮಶಕರು ಅಡಿಗರನ್ನು ಹೊಗಳುತ್ತಿದ್ದರು. ಆತ್ಮಪ್ರಶಂಸೆಯನ್ನು ವಿರೋಧಿಸುತ್ತಿದ್ದ ಅವರು ಕೊನೆಗಾಲದಲ್ಲಿ ಪ್ರಶಂಸೆಗಳನ್ನು ಒಪ್ಪಿಕೊಂಡದ್ದು ದ್ವಂದ್ವವಾಗಿ ತೋರುತ್ತದೆ’ ಎಂದರು.

‘ಅಡಿಗರ ರಾಜಕೀಯ ಧೋರಣೆ ಒಪ್ಪದಿದ್ದವರೂ ಅವರ ಸಾಮಾಜಿಕ ನಿಲುವನ್ನು ಒಪ್ಪುತ್ತಿದ್ದರು. ಅವರು ಕೃತಿನಿಷ್ಠೆ ವಿಮರ್ಶೆ ಕಲಿಸಿದರು. ಅದಕ್ಕೂ ಮೊದಲು ಸಾಹಿತ್ಯೇತರ ಅಂಶಗಳು ವಿಮರ್ಶೆಯಲ್ಲಿ ಇರುತ್ತಿದ್ದವು’ ಎಂದರು.
‘ಅವರು ಕವಿತೆ ರಚನೆಯಲ್ಲಿ ಪ್ರಜ್ಞಾಪೂರ್ವಕವಾಗಿ ಮತ್ತು  ಎಚ್ಚರಿಕೆಯಿಂದ ಭಾಷೆ ಬಳಸಿದರು. ಭಾಷಾಶುದ್ಧಿ ಕಾಪಾಡುವುದನ್ನು ಪ್ರಾಯೋಗಿಕವಾಗಿ ತೋರಿಸಿದರು. ರೂಪಕ ಹಾಗೂ ಸಂಕೇತಗಳನ್ನು ಬಳಸಿ ಕೃತಿಶಿಲ್ಪ ರಚಿಸಿದರು’ ಎಂದು ಪ್ರಶಂಸಿದರು.

ಹಿರಿಯ ಕವಿ ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್‌ ಮಾತನಾಡಿ, ‘ಅಡಿಗರಿಗೆ ಅನನ್ಯವಾಗಿ ಕವಿತೆ ರಚಿಸಬೇಕೆಂಬ ಆಸೆಯಿತ್ತು. ಹಿಂದಿನವರ ಪ್ರಭಾವಕ್ಕೆ ಒಳಗಾಗದೇ ಹೊಸದನ್ನು ನೀಡುವ ಹಂಬಲವಿತ್ತು. ಅದನ್ನು ಅವರ ಮೊದಲ ಕವಿತೆಯಾದ ‘ನನ್ನ ನುಡಿ’ಯಲ್ಲಿ ಕಾಣಬಹುದು. ಅವರ ಭಾವತರಂಗ, ಕಟ್ಟುವೆವೂ ನಾವು ಹಾಗೂ ನಡೆದು ಬಂದ ದಾರಿ ಕವಿತೆಗಳಲ್ಲಿ ನವ್ಯಕ್ಕೆ ಬರುವ ಹಂತವನ್ನು ತಿಳಿಯಬಹುದು’ ಎಂದರು.

ಅಡಿಗರ ಸ್ಮರಣಾರ್ಥ ಉಡುಪಿಯಲ್ಲಿ ಭವನ ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ
ಮನು ಬಳಿಗಾರ್‌
ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.