ADVERTISEMENT

ಅನುದಾನ ದುರ್ಬಳಕೆ ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2016, 19:49 IST
Last Updated 21 ಅಕ್ಟೋಬರ್ 2016, 19:49 IST

ಬೆಂಗಳೂರು: ‘ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಮೂರು ವರ್ಷಗಳಲ್ಲಿ ಬಿಡುಗಡೆಯಾದ ₹ 819 ಕೋಟಿ ಅನುದಾನ ದುರ್ಬಳಕೆಯಾಗಿದ್ದು, ಈ ಸಂಬಂಧ ತನಿಖೆಗೆ ಆದೇಶಿಸಬೇಕು’ ಎಂದು ಬಿಜೆಪಿ ನಗರ ಜಿಲ್ಲಾ ಘಟಕದ ವಕ್ತಾರ ಎನ್‌.ಆರ್‌. ರಮೇಶ್‌ ಅವರು ಮುಖ್ಯಮಂತ್ರಿಯವರನ್ನು ಆಗ್ರಹಿಸಿದರು.

ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಧಿಕ ಪ್ರಮಾಣ ಅನುದಾನ ಬಿಡುಗಡೆ ಆಗಿದ್ದರೂ ಮೂಲ ಸೌಕರ್ಯಗಳಿಲ್ಲದ ಅತ್ಯಂತ ಮೂರನೇ ಕಳಪೆ ಕ್ಷೇತ್ರವೆಂದು ಯಶವಂತಪುರ ಗುರುತಿಸಿಕೊಂಡಿದೆ. ಬಹುತೇಕ ಕಡೆ ಕಳಪೆ ಕಾಮಗಾರಿ ನಡೆದಿವೆ.

ಕೆಲವು ಕಡೆ ಕಾಮಗಾರಿ ಆಗದೆ ಇದ್ದರೂ ಬಿಲ್ ಮಾತ್ರ ಆಗಿದೆ. ಕೆಲವು ಕಾಮಗಾರಿಗಳನ್ನು ನಿಯಮ ಮೀರಿ ಕೆಆರ್‌ಐಡಿಎಲ್ ಸಂಸ್ಥೆಗೆ ನೀಡಲಾಗಿದೆ. ಆ ಸಂಸ್ಥೆ ಈ ಕಾಮಗಾರಿಗಳನ್ನು ಉಪ ಗುತ್ತಿಗೆ ನೀಡಿದೆ. ಆ ಉಪ ಗುತ್ತಿಗೆ ಪಡೆದವರಲ್ಲಿ ಶಾಸಕ ಎಸ್.ಟಿ. ಸೋಮಶೇಖರ್ ಅವರ ಬೆಂಬಲಿಗರು, ರಕ್ತ ಸಂಬಂಧಿಗಳು ಸೇರಿದ್ದಾರೆ ಎಂದು ಆರೋಪಿಸಿದರು.

ಕೆ.ಆರ್.ಪುರ, ಯಶವಂತಪುರ, ಆರ್‌.ಆರ್‌.ನಗರ, ಬ್ಯಾಟರಾಯನಪುರ ಕ್ಷೇತ್ರಗಳಿಗಾಗಿ ಮೂರು ವರ್ಷಗಳಲ್ಲಿ ₹3531.83 ಕೋಟಿ  ಅನುದಾನ ಬಿಡುಗಡೆಯಾಗಿದೆ. ಅಭಿವೃದ್ಧಿ ಕೆಲಸಗಳು ಸಮರ್ಪಕವಾಗಿ ನಡೆದಿಲ್ಲ ಎಂದರು. 

ಆಧಾರರಹಿತ ಆರೋಪ:  ರಮೇಶ್ ಅವರು ಆಧಾರರಹಿತವಾಗಿ ಆರೋಪ ಮಾಡುತ್ತಿದ್ದು, ಬ್ಲಾಕ್ ಮೇಲ್ ಮಾಡಲು ಹೊರಟಿದ್ದಾರೆ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT