ಬೆಂಗಳೂರು: ಭವಾನಿ ಸಿಂಗ್ ಅವರ ವಾದ ಮುಂದುವರಿಕೆಗೆ ತಡೆ ಕೋರಿದ ಡಿಎಂಕೆ ಹಿರಿಯ ನಾಯಕ ಕೆ.ಅನ್ಬಳಗನ್ ಅವರ ಮನವಿಯನ್ನು ಕರ್ನಾಟಕ ಹೈಕೋರ್ಟ್ ಮತ್ತೊಮ್ಮೆ ತಿರಸ್ಕರಿಸಿತು. ಎಐಎಡಿಎಂಕೆ ನಾಯಕಿ ಜಯಲಲಿತಾ ಮತ್ತು ಇತರ ಮೂವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲ್ಮನವಿ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸುತ್ತಿರುವ ಸರ್ಕಾರದ ವಿಶೇಷ ವಕೀಲ ಭವಾನಿ ಸಿಂಗ್ ವಾದ ಮುಂದುವರಿಕೆ ವಿರೋಧಿಸಿ ಅನ್ಬಳಗನ್ ಜ್ಞಾಪನಾ ಪತ್ರ ಸಲ್ಲಿಸಿದ್ದರು.
ಕೋರ್ಟ್ನಲ್ಲಿ ನಿಂಬೆಹಣ್ಣು..!
ಬುಧವಾರ ಬೆಳಗಿನ ಕಲಾಪದಲ್ಲಿ ಭವಾನಿ ಸಿಂಗ್ ಅವರ ಕುರ್ಚಿಯ ಮೇಲೆ ಒಂದು ನಿಂಬೆಹಣ್ಣು ಇದ್ದುದು ಕಂಡು ಬಂತು. ಈ ಬಗ್ಗೆ ಕೆಲವು ತಮಿಳು ಮಾಧ್ಯಮ ಪ್ರತಿನಿಧಿಗಳು ಭವಾನಿ ಸಿಂಗ್ ಅವರನ್ನು ಪ್ರಶ್ನಿಸಿದಾಗ, ‘ಯಾರೋ ಒಬ್ಬರು ವಾರದಲ್ಲಿ ಒಂದು ದಿನ ಬಂದು ಎಲ್ಲ ವಕೀಲರಿಗೂ ನಿಂಬೆಹಣ್ಣು ಕೊಟ್ಟು ಹೋಗುತ್ತಾರೆ’ ಎಂದರು.
‘ಜಯಲಲಿತಾ ಅಭಿಮಾನಿಯೊಬ್ಬರು ಮದುರೈನಿಂದ ಇಲ್ಲಿಗೆ ಬರುತ್ತಾರೆ. ಇದು ಭದ್ರಕಾಳಿ ಕೃಪೆ ಹೊಂದಿದ ಹಣ್ಣು ಎಂದು ಹೇಳಿ ಎಲ್ಲರಿಗೂ ನೀಡಿ ಹೋಗುತ್ತಾರೆ’ ಎಂದು ತಮಿಳುನಾಡಿನ ಕೆಲ ವಕೀಲರು ವಿವರಿಸಿದರು.
ಸಿಂಗ್ ಅವರ ಕುರ್ಚಿ ಮೇಲಿದ್ದ ನಿಂಬೆ ಹಣ್ಣಿನಲ್ಲಿ ಬಿಳಿ ಮತ್ತು ಕಪ್ಪು ಬಣ್ಣದ ವೃತ್ತಗಳು ಹಾಗೂ ಆ ವೃತ್ತಗಳ ಒಳಗೆ ಓಂ ಎಂಬ ಅಕ್ಷರ ಬರೆಯಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.