ADVERTISEMENT

ಅರ್ಚಕ ಹುದ್ದೆಗೆ ದಲಿತ ಸಮುದಾಯದವರ ನೇಮಕ

‘ಅಧಿಕಾರಿಗಳ ಜೊತೆ ಮಾತುಕತೆ’

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 19:48 IST
Last Updated 30 ಸೆಪ್ಟೆಂಬರ್ 2014, 19:48 IST

ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ರಾಜ್ಯದ ದೇವಸ್ಥಾನಗಳಲ್ಲಿ ದಲಿತ ಸಮುದಾಯದವರನ್ನು ಅರ್ಚಕರನ್ನಾಗಿ ನೇಮಿಸುವ ವಿಚಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ತಿಳಿಸಿದರು.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೀಸಲಾತಿ ಮೂಲಕ ದಲಿತ ಸಮುದಾಯದವರನ್ನು ಅರ್ಚಕ ಹುದ್ದೆಗೆ ನೇಮಿಸುವ ಚಿಂತನೆ ಇದೆ. ಆಸಕ್ತಿ ಇರುವವರಿಗೆ ವೇದ, ಶಾಸ್ತ್ರಗಳ ತರಬೇತಿ ನೀಡಲಾಗುವುದು’ ಎಂದು ಹೇಳಿದರು.

‘ಮುಜರಾಯಿ ಇಲಾಖೆಯ ಕೆಲವು ದೇವಸ್ಥಾನಗಳಲ್ಲಿ ಅರ್ಚಕರಿಗೆ ತೀರಾ ಕಡಿಮೆ ವೇತನ ಇದೆ. ಅಲ್ಲಿಗೆ ದಲಿತರನ್ನು ನೇಮಕ ಮಾಡುವುದರ ಹಿಂದಿನ ಅರ್ಥವೇನು?’ ಎಂಬ ಪ್ರಶ್ನೆಗೆ, ‘ಶ್ರೀಮಂತ ದೇವಸ್ಥಾನಗಳಿಗೂ ದಲಿತರನ್ನು ಅರ್ಚಕ­ರನ್ನಾಗಿ ನೇಮಕ ಮಾಡಬಹುದು’ ಎಂದು ಉತ್ತರಿಸಿದರು.
ದಲಿತ ಸಮುದಾಯದ ಮಹಿಳೆಯರು ಮಂಗಳೂರಿನ ಕುದ್ರೋಳಿಯ ಗೋಕರ್ಣನಾಥ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿ, ಗೋಕರ್ಣನಾಥನಿಗೆ ಪೂಜೆ ಸಲ್ಲಿಸಿದ ಮಾರನೆಯ ದಿನ ಸಚಿವರು ಈ ಇಂಗಿತ ವ್ಯಕ್ತಪಡಿಸಿದ್ದಾರೆ.

‘ಇಂದಿನ ಕಾಲಘಟ್ಟದಲ್ಲಿ ದಲಿತರು ಎಂಜಿನಿಯರ್‌, ವೈದ್ಯ ಆಗಬೇಕು ಎಂಬ ಹಂಬಲ ಹೊಂದಿರುತ್ತಾರೆ. ಅವರನ್ನು ಅರ್ಚಕ ಸ್ಥಾನಕ್ಕೆ ನೇಮಿಸುವುದು ಏಕೆ?’ ಎಂಬ ಪ್ರಶ್ನೆಗೆ, ‘ಆಸಕ್ತಿ ಇದ್ದ­ವರು ಮಾತ್ರ ಇತ್ತ ಬರಲಿ. ವೇದ, ಶಾಸ್ತ್ರಗಳ ಕುರಿತು ಅವ­ರಿಗೆ ಸೂಕ್ತ ತರಬೇತಿ ನೀಡಲಾಗುವುದು’ ಎಂದು ಸಚಿವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.