ನವದೆಹಲಿ: ಬೆಂಗಳೂರಿನ ‘ಅಲಯನ್ಸ್’ ವಿಶ್ವವಿದ್ಯಾಲಯದ ಒಡೆತನಕ್ಕೆ ಸಂಬಂಧಿಸಿದ ವಿವಾದದಿಂದ 6,500 ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ.
‘ವಿವಾದ ಏನೇ ಇರಲಿ, ವಿಶ್ವವಿದ್ಯಾಲಯದ ಶಿಸ್ತು ಮತ್ತು ಬೋಧನೆಗೆ ಯಾವುದೇ ರೀತಿಯ ಅಡ್ಡಿ ಎದುರಾಗಬಾರದು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಿವಾದಗಳಿಂದಾಗಿ ಅಡ್ಡಿ ಆಗಬಾರದಲ್ಲವೇ’ ಎಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್ ಹಾಗೂ ನವೀನ್ ಸಿನ್ಹಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ಪ್ರಶ್ನಿಸಿತು.
ವಿವಾದ ಬಗೆಹರಿಯುವವರೆಗೆ ಶಿಕ್ಷಣ ಸಂಸ್ಥೆಯ ಉಸ್ತುವಾರಿ ವಹಿಸಿಕೊಳ್ಳಲು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ಹೆಸರನ್ನು ಮಂಗಳವಾರದೊಳಗೆ ಸೂಚಿಸುವಂತೆ ವಿ.ವಿ.ಯ ಉಚ್ಚಾಟಿತ ಕುಲಪತಿ ಮಧುಕರ ಅಂಗೂರ್ ಹಾಗೂ ಅವರ ಸೋದರ ಸುಧೀರ್ ಅಂಗೂರ್ ಪರ ವಕೀಲರಿಗೆ ಪೀಠ ನಿರ್ದೇಶಿಸಿತು.
ವಿಶ್ವವಿದ್ಯಾಲಯದ ಒಡೆತನಕ್ಕೆ ಸಂಬಂಧಿಸಿದ ವಿವಾದ ಬಗೆಹರಿಸುವಂತೆ ಕೋರಿ ಸುಧೀರ್ ಅಂಗೂರ್ ಅವರು ಸಲ್ಲಿಸಿರುವ ವಿಶೇಷ ಮೇಲ್ಮನವಿಯ ವಿಚಾರಣೆಯನ್ನು ಪೀಠವು ಮೇ 23ಕ್ಕೆ ನಿಗದಿಗೊಳಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.