ಬೆಂಗಳೂರು: ಬನಶಂಕರಿ ದೇವಸ್ಥಾನದ ಬಳಿಯ ಮೆಟ್ರೊ ಮಾರ್ಗದ ಕೆಳಗೆ ಅಮರ್ಪಕ ಕಸ ವಿಲೇವಾರಿ ಮಾಡಿದ್ದಕ್ಕಾಗಿ ಬಿಬಿಎಂಪಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಶಿಕುಮಾರ್ ಮತ್ತು ಸಹಾಯಕ ಎಂಜಿನಿಯರ್ ವಿಜಯಾನಂದ ಅವರನ್ನು ಬಿಬಿಎಂಪಿ ಆಯುಕ್ತ ಜಿ.ಕುಮಾರ್ ನಾಯಕ್ ಅವರು ಶನಿವಾರ ಅಮಾನತು ಮಾಡಿದರು.
ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್ ಮತ್ತು ಪಾಲಿಕೆಯ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಆಯುಕ್ತರು ಶನಿವಾರ ಬನಶಂಕರಿ ದೇವಸ್ಥಾನದಿಂದ ಕನಕಪುರ ನೈಸ್ ರಸ್ತೆವರೆಗೆ ದಿಢೀರ್ ತಪಾಸಣೆ ನಡೆಸಿದರು.
ಭೇಟಿ ವೇಳೆ ತ್ಯಾಜ್ಯ ರಾಶಿ ಕಂಡ ವಿಜಯಭಾಸ್ಕರ್ ಅವರು ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ ಸ್ಥಳದಲ್ಲಿದ್ದ ಆಯುಕ್ತರಿಗೆ ಕರ್ತವ್ಯಲೋಪ ಎಸಗಿದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಿ, ಕಸ ವಿಲೇವಾರಿಗೆ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಇದೇ ವೇಳೆ ಕೋಣನಕುಂಟೆ ಕ್ರಾಸ್ ಬಳಿ ಬರಿಗೈಯಿಂದ ಕಸ ಎತ್ತುತ್ತಿದ್ದ ಪೌರ ಕಾರ್ಮಿಕರನ್ನು ಕಂಡ ವಿಜಯಭಾಸ್ಕರ್ ಅವರು ಅವರ ಬಳಿ ತೆರಳಿ ಸಂಬಳ ಮತ್ತು ಇತರ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಟೆಂಡರ್ ನಿಯಮಗಳಲ್ಲಿರುವ ಸವಲತ್ತುಗಳನ್ನು ಪೌರ ಕಾರ್ಮಿಕರಿಗೆ ಕೂಡಲೇ ನೀಡುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸ್ಪಷ್ಟ ನಿರ್ದೇಶನ ನೀಡುವಂತೆ ಆಯುಕ್ತರಿಗೆ ಸೂಚಿಸಿದರು.
ಸಾರಕ್ಕಿ ಮಾರುಕಟ್ಟೆಗೆ ತೆರಳಿದ ಅಧಿಕಾರಿಗಳ ತಂಡ ವ್ಯಾಪಾರಿಗಳೊಂದಿಗೆ ಸ್ವಚ್ಛತೆ ಕುರಿತು ಸಮಾಲೋಚನೆ ನಡೆಸಿತು. ‘ಎಲ್ಲೆಂದರಲ್ಲಿ ಕಸ ಎಸೆಯದೆ ಪ್ರತಿಯೊಬ್ಬರು ಅಂಗಡಿಯಲ್ಲಿ ಕಸದ ಡಬ್ಬ ಇಟ್ಟುಕೊಂಡು ಮಾರುಕಟ್ಟೆ ಸ್ವಚ್ಛತೆಗೆ ಸಹಕರಿಸಬೇಕು’ ಎಂದು ಆಡಳಿ
ತಾಧಿಕಾರಿ ವ್ಯಾಪಾರಿಗಳಿಗೆ ಹೇಳಿದರು.
ವಸಂತಪುರ ಕ್ರಾಸ್, ತಲಘಟ್ಟಪುರ, ವಾಜರಹಳ್ಳಿ, ಸರಸ್ವತಿಪುರದಲ್ಲಿ ಅಧಿಕಾರಿಗಳ ತಂಡಕ್ಕೆ ಸ್ಥಳೀಯರು ಕಸದ ಸಮಸ್ಯೆ ಕುರಿತು ಅಳಲು ತೋಡಿಕೊಂಡರು.
ಪ್ರತಿ ಶನಿವಾರ ಎಲ್ಲ ವಾರ್ಡ್ಗಳಲ್ಲಿ ತಗ್ಗು ಪ್ರದೇಶಗಳ ರಸ್ತೆಬದಿಯ ಮೋರಿಗಳನ್ನು ಸ್ವಚ್ಛಗೊಳಿಸುವಂತೆ ಆಡಳಿತಾಧಿಕಾರಿ ಆದೇಶಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.