ADVERTISEMENT

ಎಪಿಎಂಸಿ ಅಧ್ಯಕ್ಷರಾಗಿ ಆಂಜಿನಪ್ಪ ಆಯ್ಕೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 19:30 IST
Last Updated 24 ಅಕ್ಟೋಬರ್ 2014, 19:30 IST

ಆನೇಕಲ್‌: ಬೆಂಗಳೂರು ನಗರ ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷರಾಗಿ ಆನೇಕಲ್‌ ತಾಲ್ಲೂಕಿನ ಬಿದರು ಗುಪ್ಪೆಯ ಬಿ.ಜಿ.ಆಂಜಿನಪ್ಪ ಮತ್ತು ಉಪಾಧ್ಯಕ್ಷರಾಗಿ ವರ್ತೂರಿನ ನಾರಾಯಣರೆಡ್ಡಿ ಚುನಾಯಿ ತರಾದರು.

16 ಮಂದಿ ನಿರ್ದೇಶಕರು ಮತ ಚಲಾಯಿಸಬೇಕಾಗಿತ್ತು. ಈ ಪೈಕಿ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಲ್ಪನಾ ನಾರಾಯಣರೆಡ್ಡಿ ಅವರ ಮತ ಅಸಿಂಧುವಾಗಿದ್ದರಿಂದ ಬಿಜೆಪಿಯ ಬಿ.ಜಿ.ಆಂಜಿನಪ್ಪ 8 ಮತಗಳನ್ನು ಪಡೆದು ಜಯಶಾಲಿ ಯಾದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ಜಿ. ಆಂಜಿನಪ್ಪ ಅವರ ಆಯ್ಕೆಯಿಂದಾಗಿ ಎರಡನೇ ಬಾರಿಗೆ ಆನೇಕಲ್‌ ತಾಲ್ಲೂಕಿಗೆ ಎಪಿಎಂಸಿ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಈ ಹಿಂದೆ ತಾಲ್ಲೂಕಿನವರೇ ಆದ ಆದೂರು ಮಹದೇವಯ್ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ನೂತನ ಅಧ್ಯಕ್ಷ ಬಿ.ಜಿ. ಆಂಜಿನಪ್ಪ ಮಾತನಾಡಿ, ಯಶವಂತಪುರದ ಎಪಿಎಂಸಿ ಮಾರುಕಟ್ಟೆ ದಕ್ಷಿಣ ಭಾರತದಲ್ಲಿಯೇ ಅತ್ಯಂತ ದೊಡ್ಡ ಮಾರು ಕಟ್ಟೆಯಾಗಿದ್ದು, ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಮಾದರಿ ಮಾರುಕಟ್ಟೆಯನ್ನಾಗಿ ಮಾಡಲು ಶ್ರಮಿಸಲಾಗುವುದು. ಮಾರುಕಟ್ಟೆಯಲ್ಲಿನ ಆದಾಯ ಸೋರಿಕೆ ತಡೆಯಲು ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಮಾರುಕಟ್ಟೆಗೆ ಬರುವ ರೈತರಿಗೆ ವಸತಿ ಸೌಲಭ್ಯ, ರಿಯಾಯಿತಿ ದರದಲ್ಲಿ ಆಹಾರ ನೀಡಲು ಕ್ಯಾಂಟೀನ್‌ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.