ಬೆಂಗಳೂರು: ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸುವ ವಿಚಾರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ ಅವರು ನವೆಂಬರ್ 28ರಂದು ಕೌಶಿಕ್ ಮುಖರ್ಜಿ ಅವರಿಗೆ ಪತ್ರ ಬರೆದು, ‘ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಡೆಸಲಿರುವ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಅಭಿಯಾನವನ್ನು ನಿಮ್ಮ ಕಚೇರಿಯಿಂದಲೇ ಆರಂಭಿಸಬೇಕೆಂದಿದ್ದೇವೆ. ಆ ಕಾರಣದಿಂದ ಡಿಸೆಂಬರ್ 1ರಂದು ಮಧ್ಯಾಹ್ನ 2.30ಕ್ಕೆ ನಿಮ್ಮ ಕಚೇರಿಗೆ ಭೇಟಿ ನೀಡಲಿದ್ದೇವೆ. ಆ ಸಂದರ್ಭದಲ್ಲಿ ನೀವು ಮತ್ತು ನಿಮ್ಮ ಅಧಿಕಾರಿಗಳು ಹಾಜರಿದ್ದು ಪರಿಶೀಲನೆಗೆ ಸಹಕರಿಸಬೇಕು’ ಎಂದು ವಿನಂತಿಸಿಕೊಂಡಿದ್ದಾರೆ.
ಆದರೆ, ಪ್ರಾಧಿಕಾರದ ಪತ್ರಕ್ಕೆ ಮರುಪತ್ರ ಬರೆದಿರುವ ಕೌಶಿಕ್ ಮುಖರ್ಜಿ, ‘ನೀವು ನನ್ನ ಕಚೇರಿಗೆ ಯಾವುದೇ ಸಮಯದಲ್ಲಿ ಭೇಟಿ ನೀಡಿ ಪರಿಶೀಲಿಸಬಹುದು. ಆದರೆ ಇಲ್ಲಿ ಸಭೆ ನಡೆಸುವುದು ಸರಿಯಲ್ಲ. ಬೇರೆ ಕಡೆ ಸಭೆ ನಡೆಸಿದರೆ ಹಾಜರಾಗುತ್ತೇನೆ’ ಎಂಬ ಉತ್ತರ ನೀಡಿದ್ದಾರೆ. ಡಿ. 17ರಂದು ಪ್ರಾಧಿಕಾರದಿಂದ ಮತ್ತೊಂದು ಪತ್ರ ಬರೆದು, ‘ಡಿ. 26ರಂದು ನಿಮ್ಮ ಕಚೇರಿಯಲ್ಲಿ ಬೆಳಿಗ್ಗೆ 11ರಿಂದ 12ರವರೆಗೆ ಪರಿಶೀಲನೆಗೆ ಅವಕಾಶ ನೀಡಬೇಕು. ನಂತರ ಸಮ್ಮೇಳನ ಸಭಾಂಗಣದಲ್ಲಿ ಎಲ್ಲ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆಯುವ ವ್ಯವಸ್ಥೆ ಮಾಡಬೇಕು. ಅಥವಾ ಬೇರೆ ದಿನಾಂಕವನ್ನು ನೀವೇ ನಿಗದಿಪಡಿಸಬೇಕು’ ಎಂದು ತಿಳಿಸಿದ್ದಾರೆ.
ಇದಕ್ಕೆ ಡಿ. 22ರಂದು ಉತ್ತರಿಸಿರುವ ಮುಖರ್ಜಿಯವರು, ‘ಬೆಳಗಾವಿ ಅಧಿವೇಶನದ ಕಡತ ವಿಲೇವಾರಿ ಕೆಲಸ ಇರುವ ಕಾರಣ ಸಾಧ್ಯವಿಲ್ಲ’ ಎಂದಿದ್ದಾರೆ. ಆದರೆ, ಮುಖ್ಯ ಕಾರ್ಯದರ್ಶಿ ಅವರ ಈ ನಡೆಯಿಂದಾಗಿ ಶಕ್ತಿ ಕೇಂದ್ರದಿಂದಲೇ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆ ಅಭಿಯಾನ ಆರಂಭಿಸಬೇಕು ಎಂಬ ಪ್ರಾಧಿಕಾರದ ಯೋಜನೆಗೆ ತಡೆಯಾಗಿದೆ ಎಂದು ಹನುಮಂತಯ್ಯ ಆರೋಪಿಸಿದ್ದಾರೆ.
‘ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸಬೇಕು ಎಂದು ಮುಖ್ಯಮಂತ್ರಿಗಳು ಪದೇ ಪದೇ ಹೇಳುತ್ತಲೇ ಬಂದಿದ್ದಾರೆ. ಆದರೆ, ಯಾವುದೇ ಇಲಾಖೆಗಳಲ್ಲೂ ಕನ್ನಡದಲ್ಲಿ ಪತ್ರ ವ್ಯವಹಾರ, ಅಧಿಸೂಚನೆಗಳನ್ನು ಹೊರಡಿಸುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಅಸಡ್ಡೆ ಇದೆ. ಪ್ರಾಧಿಕಾರದ ಸೂಚನೆಗಳಿಗೂ ಬೆಲೆ ಕೊಡುತ್ತಿಲ್ಲ’ ಎಂದು ದೂರಿದ್ದಾರೆ.
‘ಕನ್ನಡ ಅನುಷ್ಠಾನದ ಪರಿಶೀಲನೆಗೆ ಯಾವುದೇ ಕಚೇರಿಗಳಿಗೆ ದಿಢೀರ್ ಭೇಟಿ ನೀಡುವ ಅಧಿಕಾರ ಪ್ರಾಧಿಕಾರಕ್ಕಿದೆ. ಸೌಜನ್ಯದ ಕ್ರಮವಾಗಿ ಪತ್ರ ಬರೆಯಲಾಗಿದೆ. ಮುಖ್ಯ ಕಾರ್ಯದರ್ಶಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಇನ್ನು ಪತ್ರ ವ್ಯವಹಾರ ನಡೆಸುವುದಿಲ್ಲ. ಖುದ್ದು ಭೇಟಿ ಮಾಡಲಾಗುವುದು’ ಎಂದು ಅವರು ಹೇಳಿದ್ದಾರೆ.
ಐ.ಟಿ, ಬಿ.ಟಿ ಬಿಟ್ಟುಬಿಡಿ ಅನ್ನುತ್ತಾರೆ
‘ಐವತ್ತಕ್ಕಿಂತ ಹೆಚ್ಚು ಕಾರ್ಮಿಕರಿರುವ ಖಾಸಗಿ ಕಂಪೆನಿಗಳ ಸಭೆ ಕರೆಯಲು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೆ, ‘ಐ.ಟಿ, ಬಿ.ಟಿ ಕಂಪೆನಿಗಳಲ್ಲಿ ಕನ್ನಡ ಅನುಷ್ಠಾನ, ಕನ್ನಡಿಗರಿಗೆ ಉದ್ಯೋಗ ನೀಡುವ ಬಗ್ಗೆ ಒತ್ತಡ ಹೇರಿದರೆ ಬೇರೆ ರಾಜ್ಯಗಳಿಗೆ ಹೋಗುವ ಅಪಾಯವಿದೆ. ಹೀಗಾಗಿ ಅವರನ್ನು ಬಿಟ್ಟುಬಿಡಿ’ ಎಂದು ಐ.ಟಿ, ಬಿ.ಟಿ ಇಲಾಖೆ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸರ್ಕಾರದ ಅಧಿಕಾರಿಗಳೇ ಹೀಗೆ ಹೇಳಿದರೆ ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸುವ ಪ್ರಾಧಿಕಾರದ ಯೋಜನೆಗಳಿಗೆ ಹಿನ್ನಡೆಯಾಗಲಿದೆ’.
– ಎಲ್. ಹನುಮಂತಯ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.