ADVERTISEMENT

ಕನ್ನಡ ಬಳಕೆಯಲ್ಲಿ ಬಿಎಸ್‌ಎನ್‌ಎಲ್‌ ಹಿಂದೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2015, 20:24 IST
Last Updated 3 ಆಗಸ್ಟ್ 2015, 20:24 IST
ಕನ್ನಡ ಬಳಕೆಯಲ್ಲಿ ಬಿಎಸ್‌ಎನ್‌ಎಲ್‌ ಹಿಂದೆ
ಕನ್ನಡ ಬಳಕೆಯಲ್ಲಿ ಬಿಎಸ್‌ಎನ್‌ಎಲ್‌ ಹಿಂದೆ   

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್‌ ಹನುಮಂತಯ್ಯ  ಸೋಮವಾರ ಹಲಸೂರಿನ ಭಾರತೀಯ ಸಂಚಾರ್ ನಿಗಮಕ್ಕೆ (ಬಿಎಸ್‌ಎನ್‌ಎಲ್‌) ಭೇಟಿ ನೀಡಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿದರು.

‘ನಗರದಲ್ಲಿ ಇದುವರೆಗೆ ಭೇಟಿ ನೀಡಿದ ಕೇಂದ್ರೀಯ ಸಂಸ್ಥೆಗಳ ಪೈಕಿ ಅತ್ಯಂತ ಕಡಿಮೆ ಕನ್ನಡ ಬಳಕೆ ಮಾಡುತ್ತಿರುವ ಸಂಸ್ಥೆ ಹಲಸೂರಿನ ಬಿಎಸ್‌ಎನ್‌ಎಲ್‌’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ‘ಜಾಲತಾಣಗಳನ್ನು  ಕನ್ನಡೀಕರಣ ಮಾಡುವುದಕ್ಕೆ ಇರುವ ತೊಂದರೆಗಳೇನು? ಈ ಸಂಬಂಧ ಕೇಂದ್ರ ಕಚೇರಿಗೆ ಪತ್ರ ಬರೆದು ಕನ್ನಡ ತಂತ್ರಾಂಶವನ್ನು ಬಳಸಲು ಕ್ರಮಕೈಗೊಳ್ಳಬೇಕು. ಕೈಗೊಂಡ ಕ್ರಮದ ಬಗ್ಗೆ ಪ್ರಾಧಿಕಾರಕ್ಕೆ ವರದಿ ನೀಡಬೇಕು’ ಎಂದು ಸೂಚಿಸಿದರು.

‘ರಾಜ್ಯದಲ್ಲಿ ಸ್ಥಾಪಿತವಾಗಿರುವ ಎಲ್ಲ ಕೇಂದ್ರೀಯ ಉದ್ಯಮಗಳು ಕಡ್ಡಾಯವಾಗಿ ತ್ರಿಭಾಷಾ ಸೂತ್ರವನ್ನು ಪಾಲಿಸಬೇಕು, ಗ್ರಾಹಕರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕು. ಆಗ  ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಸೆಳೆಯಲು ಸಾಧ್ಯ’ ಎಂದು  ಸಲಹೆ ನೀಡಿದರು. 

ಮೆಟ್ರೊಗೆ ಅಭಿನಂದನೆ:  ಬೈಯಪ್ಪನಹಳ್ಳಿ ಬೆಂಗಳೂರು ಮೆಟ್ರೊ ನಿಗಮದ ಕಚೇರಿಗಳಿಗೆ ಭೇಟಿ ನೀಡಿದ ಅವರು, ಆಡಳಿತದಲ್ಲಿ ಕನ್ನಡ ಅನುಷ್ಠಾನ, ನಾಮಫಲಕದಲ್ಲಿ  ತ್ರಿಭಾಷಾ ಸೂತ್ರ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸುವ ಡಾ. ಸರೋಜಿನಿ ಮಹಿಷಿ ವರದಿ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿದರು. ಸಂಸ್ಥೆಯು ಎಲ್ಲ ಸ್ತರಗಳಲ್ಲಿ ಕನ್ನಡವನ್ನು ಕಟ್ಟುನಿಟ್ಟಾಗಿ ಪಾಲಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.