ಬೆಂಗಳೂರು: ಅಪಘಾತದ ಸಂದರ್ಭದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವವರೇ ನಿಜವಾದ ಹೀರೋಗಳೇ ಹೊರತು ಸೆಲ್ಫಿ, ಫೋಟೊ ತೆಗೆಯುವವರಲ್ಲ ಎಂದು ಚಿತ್ರನಟ ವಿಜಯ ರಾಘವೇಂದ್ರ ತಿಳಿಸಿದರು.
ದಾಸರಹಳ್ಳಿ ಸಮೀಪ ಹಾವನೂರು ಬಡಾವಣೆಯಲ್ಲಿ ಪವರ್ ಫ್ರೆಂಡ್ಸ್ ಸಂಸ್ಥೆ ಸಹಯೋಗದೊಂದಿಗೆ ಲಯನ್ಸ್ ಬ್ಲಡ್ ಬ್ಯಾಂಕ್ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಶಾಸಕ ಎಸ್.ಮುನಿರಾಜು, ‘ಹುಟ್ಟು ಸಾವಿನ ಮಧ್ಯೆ ಸಮಾಜಕ್ಕೆ ನಾವು ಬಿಟ್ಟು ಹೋಗುವುದು ನಮ್ಮ ಸೇವೆಯನ್ನು ಮಾತ್ರ. ಇದು ಇತರರಿಗೆ ಮಾದರಿಯಾಗುತ್ತದೆ. ಜಾತಿ, ಧರ್ಮವೆನ್ನದೆ ಪ್ರಾಣ ಉಳಿಸಲು ಯಾರು ಸಹಾಯ ಮಾಡುತ್ತಾರೋ ಅದು ಅವರ ಹೃದಯ ಶ್ರೀಮಂತಿಕೆ ತೋರಿಸುತ್ತದೆ’ ಎಂದರು.
‘ಒಬ್ಬ ಆರೋಗ್ಯವಂತ ವ್ಯಕ್ತಿ ಮೂರು ಅಥವಾ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ’ ಎಂದು ಡಾ.ಶ್ರೀಧರ್ ಶೆಟ್ಟಿ ತಿಳಿಸಿದರು.
ಯುದ್ಧದಲ್ಲಿ ಹುತಾತ್ಮನಾದ ಯೋಧನ ಕುಟುಂಬ ಒಂದಕ್ಕೆ ಪವರ್ ಫ್ರೆಂಡ್ಸ್ ಸಂಸ್ಥೆ ವತಿಯಿಂದ ₹ 1 ಲಕ್ಷ ಚೆಕ್ ಹಾಗೂ ಆತನ ತಾಯಿಯ ಆರೋಗ್ಯ ಚಿಕಿತ್ಸೆಗಾಗಿ ₹ 40 ಸಾವಿರ ಚೆಕ್ ನೀಡಲಾಯಿತು.
ಶಿಬಿರದಲ್ಲಿ 250ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ವಾಸನ್ ಐ ಕೇರ್ ಆಸ್ಪತ್ರೆಯ ವೈದ್ಯರು 450ಕ್ಕೂ ಹೆಚ್ಚು ಜನರಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.