ಬೆಂಗಳೂರು: ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿ ಬುಧವಾರ ಮಧ್ಯಾಹ್ನ ದುಷ್ಕರ್ಮಿಗಳು ಕಾರಿನ ಗಾಜು ಒಡೆದು ₹ 5 ಲಕ್ಷ ಹಣವಿದ್ದ ಬ್ಯಾಗ್ ದೋಚಿದ್ದಾರೆ.
ಈ ಸಂಬಂಧ ಬನಶಂಕರಿಯ ಸಿವಿಲ್ ಎಂಜಿನಿಯರ್ ಮಂಜುನಾಥ್ ಎಂಬುವರು ಮಲ್ಲೇಶ್ವರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಗೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದ ಅವರು, ವೈದ್ಯಕೀಯ ವರದಿ ಪಡೆದುಕೊಳ್ಳಲು ಮಧ್ಯಾಹ್ನ 2.30ರ ಸುಮಾರಿಗೆ ಆಸ್ಪತ್ರೆಗೆ ಬಂದಾಗ ಈ ಕೃತ್ಯ ನಡೆದಿದೆ.
ಮಂಜುನಾಥ್ ಅವರ ಸ್ನೇಹಿತರೊಬ್ಬರು ಬನಶಂಕರಿಯಲ್ಲಿ ಅಪಾರ್ಟ್ಮೆಂಟ್ ಸಮುಚ್ಚಯ ಕಟ್ಟಿಸುತ್ತಿದ್ದಾರೆ. ಕಾರ್ಮಿಕರಿಗೆ ಕೂಲಿ ಕೊಡುವ ಸಲುವಾಗಿ ಅವರು ಎಸ್ಬಿಐ ಬ್ಯಾಂಕ್ನ ಚಂದ್ರಾಲೇಔಟ್ ಶಾಖೆಯಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ ₹ 5 ಲಕ್ಷ ಡ್ರಾ ಮಾಡಿದ್ದರು. ಕೆಲಸದ ನಿಮಿತ್ತ ಬೇರೆಡೆ ಹೊರಟಿದ್ದ ಅವರು, ಆ ಹಣವನ್ನು ಜತೆಗಿದ್ದ ಸ್ನೇಹಿತ ಮಂಜುನಾಥ್ ಬಳಿ ಕೊಟ್ಟಿದ್ದರು.
ಅವರು ಹಣವನ್ನು ಚೀಲದಲ್ಲಿ ಹಾಕಿಕೊಂಡು ಕಾರಿನ ಹಿಂದಿನ ಸೀಟಿನಲ್ಲಿ ಇಟ್ಟಿದ್ದರು. ಅಲ್ಲಿಂದ ಕೆ.ಸಿ.ಜನರಲ್ ಆಸ್ಪತ್ರೆಗೆ ಬಂದ ಮಂಜುನಾಥ್, ಆವರಣದಲ್ಲಿ ಕಾರು ನಿಲ್ಲಿಸಿ ವರದಿ ಪಡೆಯಲು ವೈದ್ಯರ ಬಳಿ ಹೋಗಿದ್ದರು. ವಾಪಸ್ ಬರುವಷ್ಟರಲ್ಲಿ ವಾಹನದ ಎಡಭಾಗದ ಗಾಜುಗಳು ಒಡೆದಿದ್ದವು. ಹಣದ ಚೀಲ ಕೂಡ ನಾಪತ್ತೆಯಾಗಿತ್ತು. ಕೂಡಲೇ ಅವರು ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರು ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.
ಇದೇ ನ.25ರಂದು ವೈದ್ಯರ ವೇಷದಲ್ಲಿ ಆಸ್ಪತ್ರೆಗೆ ಬಂದಿದ್ದ ದುಷ್ಕರ್ಮಿಯೊಬ್ಬ, ವಿಶೇಷ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪದ್ಮಾವತಿ ಎಂಬುವರ ಕುತ್ತಿಗೆಗೆ ಖಾಲಿ ಸಿರಿಂಜ್ ಚುಚ್ಚಿ 58 ಗ್ರಾಂನ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.