ADVERTISEMENT

‘ಕೆರೆ ತಿನ್ನುವವರು ನಮ್ಮಲ್ಲಿ ಇದ್ದಾರೆ’

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2017, 20:21 IST
Last Updated 1 ಏಪ್ರಿಲ್ 2017, 20:21 IST
‘ಕೆರೆ ತಿನ್ನುವವರು ನಮ್ಮಲ್ಲಿ ಇದ್ದಾರೆ’
‘ಕೆರೆ ತಿನ್ನುವವರು ನಮ್ಮಲ್ಲಿ ಇದ್ದಾರೆ’   

ಬೆಂಗಳೂರು: ‘ನಗರದ ತಾಪಮಾನ ಕಡಿಮೆ ಮಾಡಲು ಪ್ರತಿ ವಾರ್ಡ್‌ನಲ್ಲಿಯೂ ಕಿರು ಅರಣ್ಯ ನಿರ್ಮಾಣಕ್ಕೆ ಆಯಾ ಕ್ಷೇತ್ರದ ಜನಪ್ರತಿನಿಧಿಗಳು ಗಂಭೀರ ಚಿಂತನೆ ಮಾಡಬೇಕು’ ಎಂದು ವಿಜ್ಞಾನಿ ಟಿ.ವಿ. ರಾಮಚಂದ್ರ ಒತ್ತಾಯಿಸಿದರು.

ಕೆಂಪೇಗೌಡ ನಗರದಲ್ಲಿರುವ ಅದಮ್ಯ ಚೇತನ ಸಂಸ್ಥೆಯ ಆವರಣದಲ್ಲಿ ನಡೆದ ‘ಸುಜಲಾಂ- ಬೆಂಗಳೂರಿಗಾಗಿ ನೀರು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪರಿಸರದ ಬಗ್ಗೆ ಶಿಕ್ಷಣ ಎಲ್ಲರಿಗೂ ಅತ್ಯಗತ್ಯ. ನಮ್ಮ ಈ ಉದ್ಯಾನ ನಗರದಲ್ಲಿ ಕೆಲವರು ಅನ್ನ ತಿನ್ನುತ್ತಾರೆ, ಇನ್ನೂ ಕೆಲವರು ಕೆರೆಯನ್ನೇ ತಿನ್ನುತ್ತಾರೆ. ಹೀಗಾಗಿಯೇ 1,452 ಕೆರೆಯಿದ್ದ ಬೆಂಗಳೂರಿನಲ್ಲಿ ಈಗಿರುವುದು ಕೇವಲ 209 ಕೆರೆಗಳು’ ಎಂದು ಹೇಳಿದರು.
‘ಬೆಂಗಳೂರಿಗೆ ಬೇಕಾಗಿರುವುದು 18 ಟಿಎಂಸಿ ನೀರು. ನಗರದಲ್ಲಾಗುವ ಮಳೆನೀರನ್ನು ಸಂಗ್ರಹಿಸಿದರೆ 15 ಟಿಎಂಸಿ ನೀರು ಸಿಗುತ್ತದೆ. ಅದೇ ರೀತಿ ಕೆರೆ ಸಂರಕ್ಷಿಸಿದರೆ ಸುತ್ತಲಿನ ಅಂತರ್ಜಲ ಮಟ್ಟ ಏರುತ್ತದೆ’ ಎಂದು ಹೇಳಿದರು.

ADVERTISEMENT

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್, ‘ಬೆಂಗಳೂರು ನಿರ್ಮಾಣವಾದಾಗ ಏಪ್ರಿಲ್-ಮೇ ತಿಂಗಳಲ್ಲಿ ಗರಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ ಇರುತ್ತಿತ್ತು ಎಂಬ ಬಗ್ಗೆ ಓದಿ ತಿಳಿದಿದ್ದೇನೆ. ಆದರೆ,  ಈಗ ಅದು 37 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ’ ಎಂದು ಅನಂತ್ ಕುಮಾರ್ ಹೇಳಿದರು.
ಪಠ್ಯದಲ್ಲಿ ಹಸಿರು ಜೀವನ ಶೈಲಿ: ‘ಹಸಿರು ಜೀವನ ಶೈಲಿ ವಿಷಯವನ್ನು ಪಠ್ಯಕ್ರಮದಲ್ಲಿ ಸೇರಿಸುವ ಕುರಿತು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್‌ ಅವರೊಂದಿಗೆ ಚರ್ಚಿಸುವೆ’ ಎಂದು  ಹೇಳಿದರು.

ವೋಲ್ವೋ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ, ‘ನಗರ ಪ್ರದೇಶದಲ್ಲಿ ವಾಸಿಸುವವರ ಸಂಖ್ಯೆಯಲ್ಲಿ ಭಾರತ ಅಮೆರಿಕವನ್ನೂ ಸೋಲಿಸಲಿದೆ. ಆದರೆ ಇದಕ್ಕೆ ದೇಶ ಸಿದ್ಧಗೊಂಡಿಲ್ಲ. ಆ ಬಗ್ಗೆ ಜನಪ್ರತಿನಿಧಿಗಳು ಹೊಸ ಯೋಜನೆಗಳನ್ನು ರೂಪಿಸಬೇಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.