ಬೆಂಗಳೂರು: ಸರ್ಜಾಪುರ ಜಂಕ್ಷನ್ನಲ್ಲಿ ಬುಧವಾರ ರಾತ್ರಿ ಸ್ಕೂಟರ್ಗೆ ಕ್ಯಾಂಟರ್ ಡಿಕ್ಕಿ ಹೊಡೆದು ಬಟ್ಟೆ ವ್ಯಾಪಾರಿ ಅಬ್ದುಲ್ ಖಲೀಲ್ (34), ಅವರ ಪತ್ನಿ ಸುಲ್ತಾನಾ (28) ಹಾಗೂ ಮಗ ಅಬ್ದುಲ್ ಸೈಯದ್ (7) ಮೃತಪಟ್ಟಿದ್ದಾರೆ.
ಶ್ರೀರಾಂಪುರ ಸಮೀಪದ ರಾಮಚಂದ್ರಾಪುರ ನಿವಾಸಿಯಾದ ಖಲೀಲ್, ಪತ್ನಿ–ಮಗನನ್ನು ಕರೆದುಕೊಂಡು ಮಡಿವಾಳದಲ್ಲಿರುವ ಅತ್ತೆ ಮನೆಗೆ ಹೋಗಿದ್ದರು. ಅಲ್ಲಿಂದ ರಾತ್ರಿ 10 ಗಂಟೆ ಸುಮಾರಿಗೆ ಸ್ಕೂಟರ್ನಲ್ಲಿ ಮನೆಗೆ ವಾಪಸಾ ಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕ್ಯಾಂಟರ್, ಜಂಕ್ಷನ್ನಲ್ಲಿ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ.
ಗುದ್ದಿದ ರಭಸಕ್ಕೆ ಮೂವರೂ ಎಗರಿ ರಸ್ತೆಗೆ ಬಿದ್ದರು. ಮೈಮೇಲೆ ಕ್ಯಾಂಟರ್ನ ಚಕ್ರ ಹರಿದಿದ್ದರಿಂದ ಬಾಲಕ ಸೈಯದ್ ಸ್ಥಳದಲ್ಲೇ ಸಾವನ್ನಪ್ಪಿದ. ತಲೆಗೆ ಗಂಭೀರ ಪೆಟ್ಟು ಬಿದ್ದು ನಿತ್ರಾಣರಾಗಿದ್ದ ದಂಪತಿ, ಸೇಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದರು ಎಂದು ಪೊಲೀಸರು ಹೇಳಿದ್ದಾರೆ.
‘ಅಪಘಾತದ ನಂತರ ಚಾಲಕ ಸ್ಥಳದಲ್ಲೇ ಕ್ಯಾಂಟರ್ ಬಿಟ್ಟು ಪರಾರಿಯಾಗಿದ್ದಾನೆ. ನೋಂದಣಿ ಸಂಖ್ಯೆ ಆಧರಿಸಿ ಅದರ ಮಾಲೀಕರನ್ನು ಪತ್ತೆ ಮಾಡಿದ್ದೇವೆ. ಅವರ ಮೂಲಕ ಚಾಲಕನ ಶೋಧ ಕಾರ್ಯದಲ್ಲಿ ತೊಡಗಿದ್ದೇವೆ’ ಎಂದು ಮಡಿವಾಳ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
‘ಮೊಮ್ಮಗನನ್ನು ನೋಡಬೇಕು ಎನಿಸಿತ್ತು. ಹೀಗಾಗಿ, ಸಂಜೆ 4.30ರ ಸುಮಾರಿಗೆ ಮಗಳು ಸುಲ್ತಾನಾಳಿಗೆ ಕರೆ ಮಾಡಿ, ಮನೆಗೆ ಬಂದು ಹೋಗುವಂತೆ ಹೇಳಿದ್ದೆ. ಆ ಕೂಡಲೇ ಆಕೆ ಪತಿ–ಮಗನನ್ನು ಕರೆದುಕೊಂಡು ಮನೆಗೆ ಬಂದಿದ್ದಳು. ರಾತ್ರಿ ಎಲ್ಲರೂ ಒಟ್ಟಿಗೇ ಊಟ ಮಾಡಿದ್ದೆವು. ಮತ್ತೆ ಬರುವುದಾಗಿ ಹೇಳಿ ಮೂವರೂ ಹೊರಟು ಹೋಗಿದ್ದರು. ಆದರೆ, ಸ್ವಲ್ಪ ಸಮಯದಲ್ಲೇ ಅವರು ಅಪಘಾತಕ್ಕೆ ಬಲಿಯಾದ ವಿಚಾರ ತಿಳಿಯಿತು’ ಎಂದು ಸುಲ್ತಾನಾ ತಾಯಿ ದುಃಖತಪ್ತರಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.