ಬೆಂಗಳೂರು: ಐನೂರು ವರ್ಷಗಳಷ್ಟು ಹಳೆಯದಾದ ಗೊಟ್ಟಿಗೆರೆ ಕೆರೆಗೆ ಬೆಂಗಳೂರು -ಮೈಸೂರು ನೈಸ್ ರಸ್ತೆಗೆ ಹೊಂದಿಕೊಂಡಿರುವ ಬಸವಪುರ ಗ್ರಾಮದಿಂದ ಹರಿದು ಬರುವ ಚರಂಡಿ ನೀರಿನಿಂದ ಅಪಾಯ ಎದುರಾಗಿದೆ. ಐತಿಹಾಸಿಕ ಕೆರೆಗೆ ಇತ್ತೀಚಿನ ದಿನಗಳಲ್ಲಿ ಒದಗಿರುವ ದುರ್ಗತಿ ಕಂಡ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ನಿವಾಸಿಗಳು ಕೆರೆಯನ್ನು ಸಂರಕ್ಷಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕೆರೆಯ ಮಾಲಿನ್ಯ ಕುರಿತು ಗೊಟ್ಟಿಗೆರೆ ಗ್ರಾಮಸ್ಥರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈಗಾಗಲೇ ದೂರು ನೀಡಿದ್ದಾರೆ. ದೂರನ್ನು ಗಂಭೀರವಾಗಿ ಪರಿಗಣಿಸಿರುವ ಮಂಡಳಿಯು ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ ಉಲ್ಲಂಘನೆಗಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಎಂಜಿನಿಯರ್ಗೆ ನೋಟಿಸ್ ಜಾರಿಗೊಳಿಸಿದೆ.
ಸಮಸ್ಯೆ ಶೀಘ್ರವಾಗಿ ಪರಿಹರಿಸುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಬಸವಪುರ ಗ್ರಾಮದಲ್ಲಿ ನೆಲದಾಳದಲ್ಲಿರುವ ತ್ಯಾಜ್ಯ ನೀರು ಸಾಗಣೆ ಮಾರ್ಗಕ್ಕೆ ಸಂಸ್ಕರಣಾ ಘಟಕ ನಿರ್ಮಿಸದ ಕಾರಣ ಗ್ರಾಮದ ತ್ಯಾಜ್ಯ ನೀರು ನೇರವಾಗಿ ಗೊಟ್ಟಿಗೆರೆ ಕೆರೆಗೆ ಸೇರಿ ಜಲಮೂಲಕ್ಕೆ ಗಂಡಾಂತರ ಎದುರಾಗಿದೆ.
ಈ ಹಿಂದೆ ಕೆರೆಯ ಉಳಿವಿಗಾಗಿ ನೈಸ್ ರಸ್ತೆಯ ಮಾರ್ಗ ಬದಲಾಯಿಸುವಂತೆ ಹೋರಾಡಿದ್ದ ಪರಿಸರ ಸಂಘಟನೆಗಳು ಮತ್ತು ಎನ್ಜಿಓಗಳು ಕೆರೆಯನ್ನು ಉಳಿಸಲು ಕೈಜೋಡಿಸಬೇಕು ಎಂದು ಗೊಟ್ಟಿಗೆರೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜಾರಿಯಾಗದ ಶಿಫಾರಸು
೨೦೧೧ರಲ್ಲಿ ನಗರದ ಕೆರೆಗಳು ಕಣ್ಮರೆಯಾಗುತ್ತಿರುವ ಸಂಬಂಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಕೆರೆ ಸಂರಕ್ಷಣೆ ಸಂಬಂಧ ಮಾರ್ಗದರ್ಶಿ ಸೂತ್ರ ರಚಿಸಲು ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆ ಸಮಿತಿಯು ನೀಡಿದ ವರದಿಯಲ್ಲಿ ಗೊಟ್ಟಿಗೆರೆ ಕೆರೆಯ ಅಭಿವೃದ್ಧಿ ಮಾಡಬೇಕೆಂಬ ಶಿಫಾರಸು ಕೂಡ ಸೇರಿದೆ. ಆದರೆ ಅದು ಈವರೆಗೆ ಜಾರಿಗೆ ಬಂದಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.