ADVERTISEMENT

ಜಟಾಪಟಿ ಘಟನೆ: ಬಿಬಿಎಂಪಿ ಸಭೆಯಲ್ಲಿ ಗದ್ದಲ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2014, 19:30 IST
Last Updated 22 ಆಗಸ್ಟ್ 2014, 19:30 IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ದಕ್ಷಿಣ ವಲಯ ಕಚೇರಿ ಯಲ್ಲಿ ಈಚೆಗೆ ನಡೆದ ಹಾಲಿ ಮತ್ತು ಮಾಜಿ ಸದಸ್ಯರ ನಡುವಿನ ಜಟಾಪಟಿಗೆ ಸಂಬಂಧಿಸಿದಂತೆ ಕೌನ್ಸಿಲ್‌ ಸಭೆಯಲ್ಲಿ ಶುಕ್ರವಾರ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಇದರಿಂದ ಕೋಲಾಹಲದ ವಾತಾ ವರಣ ಉಂಟಾಗಿ ಸಭೆಯನ್ನು ಮುಂದೂಡಬೇಕಾಯಿತು.

ಘಟನೆಗೆ ಸಂಬಂಧಿಸಿದ ಮಾಹಿತಿಗಾಗಿ ಆಗ್ರಹಿಸಿ ಕಾಂಗ್ರೆಸ್‌ ಸದಸ್ಯರು ಮೇಯರ್‌ ಪೀಠದ ಮುಂದೆ ಧರಣಿಯನ್ನೂ ನಡೆಸಿದರು. ವಿರೋಧ ಪಕ್ಷದ ಸದಸ್ಯರ ಪ್ರತಿಭಟನೆ ನಡುವೆಯೇ ಪ್ರಸ್ತಾವಗಳಿಗೆ ಅನುಮೋದನೆ ಪಡೆದ ಮೇಯರ್‌ ಬಿ.ಎಸ್‌. ಸತ್ಯನಾರಾಯಣ, ನಿರ್ಣಯಗಳಿಗೆ ಒಪ್ಪಿಗೆ ಸಿಕ್ಕೊ ಡನೆ ಸಭೆಯನ್ನು ಮುಂದೂಡಿದರು. ಒಟ್ಟು 20 ನಿಮಿಷವೂ ಕಲಾಪ ನಡೆಯಲಿಲ್ಲ.

ಬೆಳಿಗ್ಗೆ 10.30ಕ್ಕೆ ಶುರುವಾಗಬೇಕಿದ್ದ ಸಭೆ ಎರಡು ಗಂಟೆ ವಿಳಂಬವಾಗಿ ಆರಂಭವಾಯಿತು. ಸಭೆ ಆರಂಭ ಆಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಬಿ.ಎನ್‌. ಮಂಜುನಾಥ ರೆಡ್ಡಿ, ‘ಬೆಂಗ ಳೂರು ದಕ್ಷಿಣ ವಲಯ ಕಚೇರಿಯಲ್ಲಿ ಜಂಟಿ ಆಯುಕ್ತರು ವಿಚಾರಣೆ ನಡೆಸುತ್ತಿದ್ದಾಗ ಬಿಬಿಎಂಪಿ ಸದಸ್ಯ ಎನ್‌.ಆರ್‌. ರಮೇಶ್‌ ಅವರು, ಮಾಜಿ ಸದಸ್ಯ ಟಿ.ವಿ. ಪ್ರಭು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಜಂಟಿ ಆಯುಕ್ತರಿಂದ ಸಭೆಗೆ ಮಾಹಿತಿ ಕೊಡಿಸಬೇಕು’ ಎಂದು ಆಗ್ರಹಿಸಿದರು.

‘ವಿಚಾರಣೆ ಸಂದರ್ಭದಲ್ಲಿ ಏನು ನಡೆಯಿತು ಮತ್ತು ಆಗ ಸಿ.ಸಿ ಟಿವಿ ಏಕೆ ‘ಆಫ್‌’ ಆಗಿತ್ತು ಎಂಬ ಮಾಹಿತಿ ನಮಗೆ ಬೇಕು’ ಎಂದು ಒತ್ತಾಯಿಸಿದರು. ‘ಸಭೆ ಮುಂದಿರುವ ಪ್ರಸ್ತಾವಗಳಿಗೆ ಸಂಬಂಧಿಸಿ ನಿರ್ಣಯ ಕೈಗೊಂಡ ಮೇಲೆ ಆಯುಕ್ತರಿಂದ ಉತ್ತರ ಕೊಡಿಸಲಾಗುವುದು’ ಎಂದು ಮೇಯರ್‌ ಹೇಳಿದರು. ಇದಕ್ಕೆ ಒಪ್ಪದ ಕಾಂಗ್ರೆಸ್‌ ಸದಸ್ಯರು ಮೇಯರ್‌ ಪೀಠದ ಮುಂದೆ ಧರಣಿ ನಡೆಸಿದರು.

ಗಲಾಟೆ ನಡುವೆಯೇ ಆರು ನಿರ್ಣಯಗಳಿಗೆ ಅನುಮೋದನೆ ಪಡೆಯಲಾಯಿತು. ವಿರೋಧ ಪಕ್ಷದ ಸದಸ್ಯರು ಧಿಕ್ಕಾರದ ಘೋಷಣೆ ಕೂಗತೊ ಡಗಿದರು. ಆಗ ಸಭೆಯನ್ನು 15 ನಿಮಿಷ ಮುಂದೂ ಡಲಾಯಿತು. ಪುನಃ ಸಭೆ ಸೇರಿದ ಬಳಿಕ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಅವರ ಪ್ರತಿಭಟನೆ ನಡುವೆಯೇ ಉಳಿದ ವಿಷಯಗಳಿಗೂ ಅನುಮೋದನೆ ಪಡೆಯಲಾಯಿತು.

‘ಜಂಟಿ ಆಯುಕ್ತರಿಂದ ವರದಿ ಪಡೆದು ಉತ್ತರ ನೀಡಲಾಗುವುದು’ ಎಂದು ಮೇಯರ್‌ ಹೇಳಿದರೂ ವಿರೋಧ ಪಕ್ಷದ ಸದಸ್ಯರು ಪಟ್ಟು ಸಡಿಸಲಿಲ್ಲ. ‘ಜಂಟಿ ಆಯುಕ್ತರು ಮ್ಯಾಜಿಸ್ಟ್ರೇಟ್‌ ಕೂಡ ಆಗಿದ್ದು, ಪ್ರಕರಣದ ಕುರಿತು ವಿಚಾರಣೆ ನಡೆಸಿ ತೀರ್ಮಾನ ಮಾಡುವ ಸ್ಥಾನದಲ್ಲಿದ್ದಾರೆ. ಅವರಿಂದ ಸಭೆಗೆ ಮಾಹಿತಿ ಕೊಡಿಸುವುದು ತಪ್ಪಾಗುತ್ತದೆ’ ಎಂದು ಬಿಜೆಪಿಯ ಎಚ್‌.ರವೀಂದ್ರ ಹೇಳಿದರು.

‘ಆಯುಕ್ತರು ಉತ್ತರ ನೀಡಲಿದ್ದಾರೆ’ ಎಂದು ಮೇಯರ್‌ ಪ್ರಕಟಿಸಿದರು. ಅದಕ್ಕೆ ವಿರೋಧ ಪಕ್ಷದವರು ಸಮ್ಮತಿ ಸೂಚಿಸಲಿಲ್ಲ. ಪ್ರಕರಣದ ಕುರಿತು ಎನ್‌.ಆರ್‌. ರಮೇಶ್‌ ವಿವರಣೆ ನೀಡಲು ಮುಂದಾದಾಗ ತೀವ್ರ ವಿರೋಧ ವ್ಯಕ್ತವಾಯಿತು. ಕಾಂಗ್ರೆಸ್‌ನ ಎಂ.ಉದಯಶಂಕರ್‌ ಮತ್ತಿತರ ಸದಸ್ಯರು, ‘ದಾದಾಗಿರಿಗೆ ಧಿಕ್ಕಾರ, ಗೂಂಡಾಗಿರಿಗೆ ಧಿಕ್ಕಾರ’ ಎಂದು ಕೂಗಿದರು. ಅದಕ್ಕೆ ಬಿಜೆಪಿ ಸದಸ್ಯ ರೆಲ್ಲ ಎದ್ದುನಿಂತು ಪ್ರತಿಭಟಿಸಿದರು. ಆಗ ಮೇಯರ್‌ ಸಭೆಯನ್ನು ಮುಂದೂಡಿದರು.

ಬಿಜೆಪಿ ಸದಸ್ಯರಿಂದ ಪ್ರತಿಭಟನೆ
ಕೌನ್ಸಿಲ್‌ ಸಭೆ ಆರಂಭಕ್ಕೂ ಮುನ್ನ ಬಿಜೆಪಿ ಸದಸ್ಯರು ಆಡಳಿತ ಪಕ್ಷದ ನಾಯಕ ಅಶ್ವತ್ಥನಾ ರಾಯಣ ಗೌಡ ಅವರ ನೇತೃತ್ವದಲ್ಲಿ ಪೌರ ಸಭಾಂಗಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ದರು. ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾ ಯಣ ಅವರಿಗೆ ಮನವಿಯನ್ನೂ ನೀಡಿದರು.
‘ಸಿದ್ದಯ್ಯ ರಸ್ತೆಯಲ್ಲಿ ಬಿಬಿಎಂಪಿಗೆ ಸೇರಿದ ಪ್ರದೇಶವನ್ನು ಶಾಸಕ ದೇವರಾಜ್‌ ಹಾಗೂ ಬಿಬಿ ಎಂಪಿ ಮಾಜಿ ಸದಸ್ಯ ಟಿ.ವಿ. ಪ್ರಭು ಅತಿಕ್ರಮಿಸಿ ದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ತನಿಖೆ ನಡೆಸಲು ಸೂಚಿಸಿದ್ದೇನೆ. ಅತಿಕ್ರಮಣ ದೃಢಪಟ್ಟರೆ ತೆರವು ಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಆಯುಕ್ತರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿ ದರು. ‘ಎನ್‌.ಆರ್‌. ರಮೇಶ್‌ ಅವರಿಗೆ ಜೀವ ಬೆದರಿಕೆ ಇದ್ದು, ರಕ್ಷಣೆ ಬೇಕು ಎನ್ನುವ ಕೋರಿ ಕೆಯನ್ನೂ ಮಾಡಲಾಗಿದೆ. ನಗರ ಪೊಲೀಸ್‌ ಕಮಿ ಷನರ್‌ ಜತೆ ಮಾತನಾಡಿ ಅವರಿಗೆ ರಕ್ಷಣೆ ನೀಡು ವಂತೆ ಕೋರಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.