ಬೆಂಗಳೂರು: ಕಂಕಣ ಸಂಸ್ಥೆಯು ಜಯನಗರ 4 ನೇ ಹಂತದಲ್ಲಿ ಭಾನುವಾರ ‘ಕನ್ನಡ ಮಾತಾಡಿ’ ಅಭಿಯಾನವನ್ನು ಆಯೋಜಿಸಿತ್ತು.
ಅಭಿಯಾನದಲ್ಲಿ ಘೋಷಣೆಗಳ ಅಬ್ಬರ, ಪ್ರತಿಭಟನೆಯ ಕೂಗಿರಲಿಲ್ಲ. ಮೌನವಾಗಿ ಕನ್ನಡಾಭಿಮಾನದ ಬಗೆಗೆ ಪ್ರೀತಿ ಮೂಡಿಸಲಾಯಿತು. ಈ ಅಭಿಯಾನದಲ್ಲಿ ಐಟಿ ಉದ್ಯೋಗಿಗಳೂ ಸೇರಿದಂತೆ 80ಕ್ಕೂ ಹೆಚ್ಚು ಮಂದಿ ಭಿತ್ತಿಚಿತ್ರಗಳನ್ನು ಹಿಡಿದು, ಕನ್ನಡ ಮಾತಾಡಿ ಎಂದು ಪ್ರೇರೇಪಿಸಿದರು.
ಅಪ್ಪ, ಅಮ್ಮ ಚಂದ, ಇಲ್ಲೇಕೆ ಮಮ್ಮಿ, ಡ್ಯಾಡಿ ದುರ್ಗಂಧ.. ಐಟಿಯಲ್ಲಿದ್ದರೂ, ಬಿಟಿಯಲ್ಲಿದ್ದರೂ ಕನ್ನಡ ಮಾತಾಡ್ ಗುರು.. ತಾಯಿಯಂತೆ ತಾಯ್ನುಡಿ, ಪ್ರೀತಿಯಿಂದ ನೀ ನುಡಿ.. ಲಂಡನ್ನಲ್ಲೇ ಹುಟ್ಟಿದಂತೆ ಆಡಬೇಡಿ.. ಕನ್ನಡ ಮಣ್ಣಿನ ಋಣ ಮರೆಯಬೇಡಿ ಎಂಬ ಸಂದೇಶಗಳ ಮೂಲಕ ಕನ್ನಡದ ಬಗ್ಗೆ ಜಾಗೃತಿ ಮೂಡಿಲಾಯಿತು.
ಅಭಿಯಾನದ ಆಯೋಜಕ ಕವಿರಾಜ್, ‘ಕಂಕಣ ಬಳಗ ನಡೆಸಿದ ಸಮೀಕ್ಷೆ ಪ್ರಕಾರ ನಮ್ಮಲ್ಲಿ ಮೂರು ವರ್ಗಗಳಿವೆ. ಒಂದು ವರ್ಗ ಅಪ್ಪಟ ಕನ್ನಡಿಗರದ್ದು, ಇವರಿಗೆ ಕನ್ನಡ ಮಾತಾಡಲು ಯಾವುದೇ ಹಿಂಜರಿಕೆ ಇಲ್ಲ. ಎರಡನೇ ವರ್ಗ ಸಾಮಾನ್ಯವಾಗಿ ಕನ್ನಡಿಗರೇ ಆದರೂ, ವಾಣಿಜ್ಯ, ವ್ಯವಹಾರಗಳ ಸಂದರ್ಭದಲ್ಲಿ ಇಂಗ್ಲಿಷ್ ಬಳಕೆ ಮಾಡುವವರು, ಮೂರನೇ ವರ್ಗ ಲಂಡನ್ನಲ್ಲಿ ಹುಟ್ಟಿ ಬೆಳೆದವರಂತೆ ಆಡುವವರದ್ದು’ ಎಂದರು.
‘ನಾವು ಮೊದಲಿನ ಎರಡು ವರ್ಗಗಳನ್ನು ಅಪ್ಪಟ ಕನ್ನಡಿಗರಾಗಿಯೇ ಉಳಿಸಿಕೊಳ್ಳಲು ಈ ಅಭಿಯಾನ ಆರಂಭಿಸಿದ್ದೇವೆ. ಆ ಮೂಲಕ ಕನ್ನಡದಲ್ಲಿ ಮಾತನಾಡುವವರ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಿ, ಭಾಷಾಭಿಮಾನ ಮೂಡಿಸಲಾಗುವುದು. ಇದೇ ವೇಳೆ, ಕನ್ನಡ ಕಲಿಯಲು ಇಚ್ಛಿಸುವ ಅನ್ಯಭಾಷಿಕರಿಗೂ ನೆರವಾಗಲಿದ್ದೇವೆ’ ಎಂದು ಹೇಳಿದರು.
‘ಕಳೆದ ತಿಂಗಳು ಜೆ.ಪಿ.ನಗರದ ಸೆಂಟ್ರಲ್ ಮಾಲ್ನಲ್ಲಿ ಮೊದಲ ಅಭಿಯಾನ ನಡೆಸಲಾಗಿತ್ತು. ಮಾಲ್, ಸೂಪರ್ ಮಾರ್ಕೆಟ್, ಬ್ಯಾಂಕ್ ಹಾಗೂ ಕಚೇರಿಯಂತಹ ಸ್ಥಳಗಳಲ್ಲಿ ಕನ್ನಡದಲ್ಲಿ ಮಾತನಾಡಲು ಹಿಂಜರಿಯುವ ಮಂದಿಗೆ ಕನ್ನಡ ಮಾತನಾಡಲು ಪ್ರೇರೇಪಿಸುವುದು ನಮ್ಮ ಉದ್ದೇಶವಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.