ಬೆಂಗಳೂರು: ‘ಬಾಗಲಗುಂಟೆಯಿಂದ ಹೆಸರಘಟ್ಟ ಗ್ರಾಮದವರೆಗೆ ಇರುವ ಜಲಮಂಡಳಿ ಜಾಗ ಒತ್ತುವರಿ ಆಗಿದೆ. ಆ ಬಗ್ಗೆ ತಿಳಿದಿದ್ದು, ಅಧಿಕಾರಿಗಳು ಮೌನ ವಹಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ’ ಎಂದು ಸ್ಥಳೀಯರು ಆರೋಪಿಸಿದರು.
‘ಬಾಗಲಗುಂಟೆ, ಚಿಕ್ಕಬಾಣಾವರ, ಸೋಲದೇವನ ಹಳ್ಳಿ, ತರಬನಹಳ್ಳಿ, ಹುರುಳಿ ಚಿಕ್ಕನಹಳ್ಳಿ ಗ್ರಾಮಗಳಲ್ಲಿ ಜಲಮಂಡಳಿ ಜಾಗದಲ್ಲಿ ಅಂಗಡಿಗಳನ್ನು ನಿರ್ಮಿಸಿಕೊಳ್ಳಲಾಗಿದೆ. ವಾಟರ್ ವಾಲ್ ಇರುವ ಕಡೆ ಇಪ್ಪತ್ತು ಅಡಿಗಳಷ್ಟು ಜಾಗ ಬಿಡಬೇಕು ಎಂಬ ನಿಯಮ ಇದೆ. ಆದರೆ, ಅದರ ಮೇಲೆಯೇ ಅಂಗಡಿ, ಮನೆಗಳನ್ನು ನಿರ್ಮಿಸಿದ್ದಾರೆ’ ಎಂದರು.
‘ಅಧಿಕಾರಿಗಳು ಮಾಹಿತಿ ಕಲೆಹಾಕಿ ಒತ್ತುವರಿ ಜಾಗವನ್ನು ತೆರೆವು ಗೊಳಿಸಬೇಕು. ಆದರೆ, ಅಧಿಕಾರಿಗಳೇ ಸರ್ಕಾರಿ ಭೂಮಿಯನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ’ ಎಂದು ಚಿಕ್ಕ ಬಾಣಾವರದ ನಿವಾಸಿ ಆನಂದ್ ದೂರಿದರು. ‘ಹುರುಳಿ ಚಿಕ್ಕನಹಳ್ಳಿಯ ವಾಟರ್ ವಾಲ್ ಸಮೀಪ, ‘ಈ ಸ್ವತ್ತು ಜಲಮಂಡಳಿಗೆ ಸೇರಿದ್ದು’ ಎಂಬ ಫಲಕ ಇದ್ದರೂ ಅಲ್ಲಿ ಅಂಗಡಿ, ಮನೆಗಳನ್ನು ನಿರ್ಮಿಸಲಾಗಿದೆ’ ಎಂದು ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.