ಬೆಂಗಳೂರು: ‘ನಾನು ಕನ್ನಡದಲ್ಲಿದ್ದುಕೊಂಡೂ ಒಂದು ರೀತಿಯ ಪರಕೀಯತೆಯ ಭಾವ ಅನುಭವಿಸಿದೆ’ ಎಂದು ಕವಿ ಕೆ.ವಿ. ತಿರುಮಲೇಶ್ ಹೇಳಿದರು.
‘ಆಟ–ಗಲಾಟ: ಬೆಂಗಳೂರು ಸಾಹಿತ್ಯೋತ್ಸವ’ (ಕನ್ನಡ ಸಾಹಿತ್ಯ ಸಾಧನೆ) ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಕನ್ನಡದವನಾದರೂ ಇಲ್ಲಿರದೇ, ಹೈದರಾಬಾದಿನಲ್ಲಿ ಇರುತ್ತಿದ್ದೆ. ಹಾಗಾಗಿ, ಒಂದು ರೀತಿಯ ಪರಕೀಯತೆಯ ಭಾವ ಉಂಟಾಗುತ್ತಿತ್ತು. ಕೆಲವೊಮ್ಮೆ ನಾನು ಅನ್ಯಗ್ರಹ ಜೀವಿ ವಾಸಿ ಎನಿಸುತ್ತಿತ್ತು ಎಂದರು.
ಅನ್ಯಗ್ರಹ ಜೀವಿ ಕಥೆ: ಆಟ–ಗಲಾಟ ಸಾಹಿತ್ಯೋತ್ಸವ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿದ ಕುರಿತು ತಿರುಮಲೇಶ್ ಅವರು ಒಂದು ಕಥೆ ಮೂಲಕ ಸ್ವಾರಸ್ಯಕರವಾಗಿ ಹೇಳಿದರು.
‘ಒಮ್ಮೆ ಅನ್ಯಗ್ರಹಜೀವಿಗಳು ಭೂಮಿಗೆ ಬಂದು, ಇಲ್ಲಿನ ಮೂವರನ್ನು ಅಧ್ಯಯನಕ್ಕೆಂದು ತಮ್ಮ ಗ್ರಹಕ್ಕೆ ಕರೆದುಕೊಂಡು ಹೋದರಂತೆ. ಆಗ ಮೂವರು ಬಡಪಾಯಿಗಳು ನಮ್ಮನ್ನೇ ಯಾಕೆ ಕರೆದುಕೊಂಡು ಬಂದಿರಿ’ ಎಂದು ಪ್ರಶ್ನಿಸಿದರಂತೆ. ಆಗ ಅನ್ಯಗ್ರಹ ಜೀವಿಗಳು ಕೂಡಾ ‘ನಾವೇ ಯಾಕೆ ನಿಮ್ಮನ್ನು ಕರೆದುಕೊಂಡು ಬಂದೆವು’ ಎಂದು ಮರು ಪ್ರಶ್ನಿಸಿದರಂತೆ. ಈ ಪ್ರಶಸ್ತಿ ಸಂದರ್ಭದಲ್ಲಿ ನನ್ನ ಪ್ರಶ್ನೆಯೂ ಇದೇ ಆಗಿದೆ. ನಾನು ಯಾಕೆ ಎಂದು? ಮೊದಲಿಗೆ ನನಗೆ ಅಚ್ಚರಿಯಾಯಿತು. ಇರಲಿ, ಆಟ–ಗಲಾಟಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಮಾತು ಮಗಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.