ಬೆಂಗಳೂರು: ನಗರದ ರಾಧಾಕೃಷ್ಣ ದೇವಾಲಯ ವಾರ್ಡ್ನ ಇಂದಿರಾ ಕ್ಯಾಂಟೀನ್ಗೆ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಭಾನುವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಕ್ಯಾಂಟೀನ್ನಲ್ಲಿ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳ ಕುರಿತು ಪರಿಶೀಲಿಸಿದರು. ಪಾಲಿಕೆ ನಿಗದಿ ಪಡಿಸಿದ ಪ್ರಮಾಣದಲ್ಲೇ ಆಹಾರ ಪೂರೈಕೆ ಮಾಡಲಾಗುತ್ತಿದೆಯೇ ಎಂಬುದನ್ನು ಪರೀಕ್ಷಿಸಲು ಅಲ್ಲೇ ಇದ್ದ ತೂಕದ ಯಂತ್ರದಲ್ಲಿ ಊಟವನ್ನು ಅಳತೆ ಮಾಡಿದರು. ಬಾಣಸಿಗರೊಂದಿಗೆ ಚರ್ಚೆ ನಡೆಸಿದ ಅವರು, ಆಹಾರ ಸಿದ್ಧವಾಗುವ ಮತ್ತು ಪೂರೈಸುವ ವಿಧಾನದ ಬಗ್ಗೆ ಮಾಹಿತಿ ಪಡೆದರು.
ಆಯುಕ್ತರು ಕೂಡ ಎಲ್ಲರಂತೆ ಸರದಿ ಸಾಲಿನಲ್ಲಿ ನಿಂತು ಟೋಕನ್ ಪಡೆದು ಊಟ ತಿಂದರು. ಈ ವೇಳೆ ಗ್ರಾಹಕರೊಂದಿಗೆ ಚರ್ಚಿಸಿದರು.
‘ಊಟದ ಸಮಯವನ್ನು ಮಧ್ಯಾಹ್ನ 3.30ರವರೆಗೂ ವಿಸ್ತರಿಸಬೇಕು’ ಎಂದು ಗ್ರಾಹಕರು ಮನವಿ ಮಾಡಿದರು.
‘ಈ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಆಯುಕ್ತರು ಭರವಸೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಕ್ಯಾಂಟೀನ್ನಲ್ಲಿ ಆಹಾರದ ಪ್ರಮಾಣ ಹಾಗೂ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ಈ ಬಗ್ಗೆ ಗ್ರಾಹಕರೂ ಸಂತಸ ವ್ಯಕ್ತಪಡಿಸಿದರು’ ಎಂದರು.
‘ಕೇಂದ್ರೀಕೃತ ಅಡುಗೆ ಮನೆಯಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರದಲ್ಲಿ ಆಹಾರವನ್ನು ಅಳತೆ ಮಾಡಿದ ಬಳಿಕ ಕ್ಯಾಂಟೀನ್ಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಇದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಅಲ್ಲದೆ, ಅದರ ಛಾಯಾಚಿತ್ರಗಳು ಪಾಲಿಕೆ ಪೋರ್ಟ
ಲ್ಗೆ ರವಾನೆಯಾಗುತ್ತವೆ. ಇದೇಪ್ರಕ್ರಿಯೆಯನ್ನು ಕ್ಯಾಂಟೀನ್ಗೆ ಆಹಾರ ಪೂರೈಸಿದ ನಂತರವೂ ಅನುಸರಿಸಲಾಗುತ್ತದೆ’ ಎಂದು ತಿಳಿಸಿದರು.
‘ಕ್ಯಾಂಟೀನ್ನಲ್ಲಿ ಆಹಾರದ ಪ್ರಮಾಣ ಮತ್ತು ಪಟ್ಟಿಯನ್ನು ಎದ್ದು ಕಾಣುವಂತೆ ಪ್ರದರ್ಶಿಸಲಾಗುತ್ತದೆ. ಪ್ರತಿ ಕ್ಯಾಂಟೀನ್ನಲ್ಲಿ ಸಣ್ಣ ಎಲೆಕ್ಟ್ರಾನಿಕ್ ತೂಕದ ಯಂತ್ರಗಳಿವೆ. ನಿಗದಿತ ಆಹಾರವನ್ನು ಪೂರೈಸದಿದ್ದರೆ, ಈ ತೂಕದ ಯಂತ್ರದಲ್ಲಿ ಪರೀಕ್ಷೆ ಮಾಡಬಹುದು. ಈ ಸೌಲಭ್ಯವನ್ನು ಗ್ರಾಹಕರು ಬಳಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.